Sunday, July 12, 2026
Google search engine
Homeಕಾನೂನುಸಾಕು ನಿಲ್ಲಿಸಿ, ನಿಮ್ಮ ಅರ್ಜಿ ಸ್ವೀಕರಿಸಲ್ಲ: ಮಂದಿರ-ಮಸೀದಿ ವಿವಾದಕ್ಕೆ ಸುಪ್ರೀಂಕೋರ್ಟ್‌ ಚಾಟಿ

ಸಾಕು ನಿಲ್ಲಿಸಿ, ನಿಮ್ಮ ಅರ್ಜಿ ಸ್ವೀಕರಿಸಲ್ಲ: ಮಂದಿರ-ಮಸೀದಿ ವಿವಾದಕ್ಕೆ ಸುಪ್ರೀಂಕೋರ್ಟ್‌ ಚಾಟಿ

ನವದೆಹಲಿ: ಮಂದಿರ- ಮಸೀದಿ ವಿವಾದದ ಕುರಿತು ಪದೇಪದೆ ಅರ್ಜಿಗಳು ಬರುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಸಾಕು ನಿಲ್ಲಿಸಿ. ಇನ್ನು ಮುಂದೆ ನಿಮ್ಮ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದೆ.

ಮಹತ್ವದ ಬೆಳವಣಿಗೆಯಲ್ಲಿ ಮಂದಿರ-ಮಸೀದಿ ವಿವಾದ ನಿಯಂತ್ರಣ ಮೀರುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ಈ ವಿಚಾರದಲ್ಲಿ ಸಲ್ಲಿಕೆಯಾಗಿರುವ ಯಾವುದೇ ಹೊಸ ಅರ್ಜಿಗಳ ವಿಚಾರಣೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್‌ ಖನ್ನಾ, 1991ರ ಪೂಜಾ ಸ್ಥಳಗಳ ಕಾಯ್ದೆಯಡಿ ಸಲ್ಲಿಕೆಯಾಗುತ್ತಿರುವ ಹೊಸ ಅರ್ಜಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಈ ವಿಷಯದಲ್ಲಿ ಯಾವುದೇ ಹೊಸ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

1991ರ ಪೂಜಾ ಸ್ಥಳಗಳ ಕಾಯ್ದೆಯಡಿ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ಸಿಜೆಐ ಸಂಜೀವ್‌ ಖನ್ನಾ, ಎಲ್ಲದಕ್ಕೂ ಒಂದು ಮಿತಿ ಇರಬೇಕು, ಇನ್ನು ಸಾಕು ಮಾಡಿ.ಎಂದು ಅರ್ಜಿದಾರರನ್ನು ಉಲ್ಲೇಖಿಸಿ ಗುಡುಗಿದರು.

ಈ ವಿಚಾರವಾಗಿ ಸಲ್ಲಿಕೆಯಾಗುವ ಯಾವುದೇ ಹೊಸ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುವುದಿಲ್ಲ ಎಂದು ನ್ಯಾ. ಸಂಜೀವ್‌ ಖನ್ನಾ ಇದೇ ವೇಳೆ ಸ್ಪಷ್ಟಪಡಿಸಿದರು.

ಆದಾಗ್ಯೂ, ಇದುವರೆಗೂ ಸಲ್ಲಿಕೆಯಾದ ಹೊಸ ಅರ್ಜಿಗಳಿಗೆ ನೋಟಿಸ್ ನೀಡಲು ಸಿಜೆಐ ಸಂಜೀವ್‌ ಖನ್ನಾ ನಿರಾಕರಿಸಿದರೂ, ಹೆಚ್ಚುವರಿ ಆಧಾರಗಳೊಂದಿಗೆ ಹಸ್ತಕ್ಷೇಪ ಅರ್ಜಿ ಸಲ್ಲಿಸಲು ಕೋರ್ಟ್ ಅವಕಾಶ ನೀಡಿದೆ.

ಇತಿಹಾಸದಲ್ಲಿ ಕೆಡವಲಾದ ಹಿಂದೂ ದೇವಾಲಯಗಳನ್ನು ಮರಳಿ ಪಡೆಯುವ ಕಾನೂನು ಪ್ರಯತ್ನಗಳ ದೃಷ್ಟಿಯಿಂದ, ಪೂಜಾ ಸ್ಥಳಗಳ ಕಾಯ್ದೆಯ ಸಿಂಧುತ್ವದ ಕುರಿತ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಮುಂದುವರೆಸಿದೆ.

1947 ಆಗಸ್ಟ್ 15ರಿಂದ ಅನ್ವಯವಾಗುವಂತೆ, ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಬದಲಾಯಿಸುವುದನ್ನು ತಡೆಯಲು 1991ರಲ್ಲಿ ಈ ಕಾನೂನನ್ನು ಜಾರಿಗೆ ತರಲಾಗಿತ್ತು.

ರಾಮ ಜನ್ಮಭೂಮಿ ವಿವಾದವು ಈ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿತ್ತು.ಕಾನೂನಿನ ಸಿಂಧುತ್ವದ ಮೇಲಿನ ಮೂಲ ಅರ್ಜಿಯನ್ನು ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದರು. ಆದರೆ ಕಳೆದ ವರ್ಷ 10 ಮಸೀದಿಗಳನ್ನು ಮರಳಿ ಪಡೆಯಲು ಹಿಂದೂ ಪಕ್ಷಗಳು ಸಲ್ಲಿಸಿದ್ದ ವಿವಿಧ 18 ಮೊಕದ್ದಮೆಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸ್ಥಗಿತಗೊಳಿಸಿತ್ತು.‌

ದೇವಸ್ಥಾನ-ಮಸೀದಿ ವಿವಾದಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಸುಪ್ರೀಂಕೋರ್ಟ್ ಒಟ್ಟಿಗೆ ಸೇರಿಸಿತ್ತು. ಇದರಲ್ಲಿ ಶಾಹಿ ಈದ್ಗಾ-ಕೃಷ್ಣ ಜನ್ಮಭೂಮಿ, ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಮತ್ತು ಸಂಭಲ್ ಮಸೀದಿ ವಿವಾದಗಳು ಸೇರಿವೆ.

ಪೂಜಾ ಸ್ಥಳಗಳ ಹೊಸ ಸಮೀಕ್ಷೆಗಳನ್ನು ಸುಪ್ರೀಂಕೋರ್ಟ್ ಸ್ಥಗಿತಗೊಳಿಸಿದ್ದು, ಈ ವಿಚಾರವಾಗಿ ಕೇಂದ್ರಕ್ಕೆ ಉತ್ತರಿಸಲು ಆದೇಶಿಸಿದೆ ಎಂಬ ವರದಿಗಳಿವೆ. ಈ ವಿಚಾರವಾಗಿ ಕಾಂಗ್ರೆಸ್ ಮತ್ತು ಎಐಎಂಐಎಂ ಕೂಡ ಸುಪ್ರೀಂಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು,1991ರ ಪೂಜಾ ಸ್ಥಳಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ ಒತ್ತಾಯಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments