ಬೆಂಗಳೂರು: ಕನಕಪುರದ ಬಳಿಯಿದ್ದ ಜಮೀನು ಮಾರಾಟದ ಹಣವನ್ನು ತೆಗೆದುಕೊಂಡು ಬರುವಾಗ ಹೊಂಚು ಹಾಕಿ ಸ್ನೇಹಿತನೇ ಮತ್ತೊಬ್ಬನ ಜೊತೆ ಸೇರಿ 2.47 ಕೋಟಿ ನಗದು ಹಾಗೂ ಇನ್ನೋವಾ ಕಾರು ಕಳವು ಮಾಡಿ ಪರಾರಿಯಾಗಿದ್ದ ಪ್ರಕರಣವನ್ನು ಬೇಧಿಸಿರುವ ಸುಬ್ರಮಣ್ಯಪುರ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಸಂಬಂಧ ಉತ್ತರಹಳ್ಳಿ ಮುಖ್ಯರಸ್ತೆಯ ಚಿಕ್ಕಲ್ಲಸಂದ್ರ ಮಂಜುನಾಥ ಆರ್.ಎಸ್(43) ಹಾಗೂ ನಾಗನಾಯಕನಹಳ್ಳಿಯ ಕೃಷ್ಣಕುಮಾರ್(38) ನನ್ನು ಬಂಧಿಸಿ 2 ಕೋಟಿ 20 ಲಕ್ಷದ 48 ಸಾವಿರ ನಗದು ಹಾಗೂ 15 ಲಕ್ಷ ಮೌಲ್ಯದ ಇನ್ನೋವಾ ಕಾರ್ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಕಳೆದ ಮಾ.28 ರಂದು ಬನಶಂಕರಿ 3ನೇ ಹಂತದ ಪಾಪಯ್ಯ ಗಾರ್ಡನ್ನ ಸುಕುಮಾರ್ ಅವರು ತಮಗೆ ಸೇರಿದ 4 ಎಕರೆ 18 ಗುಂಟೆ ಜಮೀನನ್ನು ಮಾರಾಟ ಮಾಡಿ ಕನಕಪುರದ ನೊಂದಣಿ ಕಛೇರಿಯಲ್ಲಿ ನೊಂದಾಯಿಸಿ, 2 ಕೋಟಿ 47 ಲಕ್ಷ ನಗದನ್ನು ಪಡೆದು ಅದನ್ನು ಮನೆಗೆ ತೆಗೆದುಕೊಂಡು ಹೋಗುವಾಗ ಆ್ಯಪ್ ಮೂಲಕ ಇನ್ನೋವಾ ಕಾರು ಬುಕ್ ಮಾಡಿ, ಚಾಲಕನಾಗಿ ಸ್ನೇಹಿತ ಆರೋಪಿ ಮಂಜುನಾಥ ಕರೆಸಿಕೊಂಡಿದ್ದರು.
ಬಾಡಿಗೆ ಕಾರು ಮತ್ತು ಸ್ನೇಹಿತನಾದ ಚಾಲಕನ ಜೊತೆ ಸುಕುಮಾರ್ ನಗದನ್ನು ಕಾರಿನಲ್ಲಿ ಇಟ್ಟುಕೊಂಡು ಮನೆಗೆ ತೆರೆಳುತ್ತಿರುವಾಗ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಎಟಿಎಂವೊಂದರಲ್ಲಿ ಸುಕುಮಾರ್ ತಮ್ಮ ಖಾತೆಗೆ 1 ಲಕ್ಷ ನಗದನ್ನು ಜಮಾಮಾಡಿ, ವಾಪಸ್ ಬರುವಷ್ಟರಲ್ಲಿ ಚಾಲಕ ಮಂಜುನಾಥ್ ಇನ್ನೋವಾ ಕಾರ್ ಹಾಗೂ ನಗದು 2 ಕೋಟಿ 46 ಲಕ್ಷ ನಗದು ದೋಚಿ ಪರಾರಿಯಾಗಿದ್ದನು.
ಕಿಮ್ಸ್ ಆಸ್ಪತ್ರೆ ಬಳಿ ಕಾರು:
ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕರಣ ದಾಖಲಿಸಿ ತನಿಖೆಯನ್ನು ಆಯಾಮಗಳಲ್ಲಿ ಕೈಗೊಂಡು ಖಚಿತ ಮಾಹಿತಿಯನ್ನು ಕಲೆಹಾಕಿ ಮರುದಿನ ಕಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಕಳವು ಮಾಡಿದ ಸ್ನೇಹಿತ ಇನ್ನೋವಾ ಕಾರನ್ನು ಕಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಿ ಅದರಲ್ಲಿದ್ದ ಹಣವನ್ನು ತನ್ನ ಸ್ವಂತ ಸ್ವಿಫ್ಟ್ ಕಾರಿಗೆ ಮತ್ತೊಬ್ಬ ಆರೋಪಿ ಕೃಷ್ಣಕುಮಾರ್
ಸಹಾಯದಿಂದ ಬದಲಾಯಿಸಿಕೊಂಡು ಅಲ್ಲೇ ಇನ್ನೋವಾ ಕಾರನ್ನು ಬಿಟ್ಟು ಪರಾರಿಯಾಗಿ ಪತ್ತೆಹಚ್ಚಿ ಕಾರನ್ನು ಜಪ್ತಿ ಮಾಡಲಾಗಿದೆ.
ಕಾರ್ಯಾಚರಣೆಯನ್ನು ತೀವ್ರಗೊಳಿಸಿ ಇಬ್ಬರನ್ನು ಕೆಎಂ ದೊಡ್ಡಿಯ ಭಾರತಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಇಬ್ಬರನ್ನು ಬಂಧಿಸಿ 2,20,48,000 ನಗದು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸ್ವಿಫ್ಟ್ ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರು ಚಾಲಕನಾಗಿ ಕೃತ್ಯ:
ಆರೋಪಿ ಮಂಜುನಾಥ್ ಕಾರ್ ಡ್ರೈವರ್ ಆಗಿದ್ದು, ಬಸವನಗುಡಿಯಲ್ಲಿ ಅಪಹರಣ, ಹನುಮಂತನಗರದಲ್ಲಿ ಅಟ್ರಾಸಿಟಿ, ಶ್ರೀರಂಗಪಟ್ಟಣದಲ್ಲಿ ದರೋಡೆ ಸೇರಿ ಮೂರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಎರಡನೇ ಆರೋಪಿ ಕೃಷ್ಣಕುಮಾರ್ ಜೆಸಿಬಿ ಚಾಲಕನಾಗಿದ್ದು,ಇದೇ ಮೊದಲ ಬಾರಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದು, ಕಾರ್ಯಾಚರಣೆಯನ್ನು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ್, ಮಾರ್ಗದರ್ಶನದಲ್ಲಿ ಸುಬ್ರಮಣ್ಯಪುರ ಪೊಲೀಸ್ ಇನ್ಸ್ಪೆಕ್ಟರ್ ರಾಜು.ಎಂ.ಎಸ್ ಮತ್ತವರ ಸಿಬ್ಬಂದಿ ಕೈಗೊಂಡಿತ್ತು ಎಂದು ಹೇಳಿದರು.



