ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂನ ಖ್ಯಾತ ನಟ ಹಾಗೂ ಕಿರುತೆರೆ ಕಲಾವಿದ ವಿಷ್ಣು ಪ್ರಸಾದ್ ಶುಕ್ರವಾರ ಬೆಳಿಗ್ಗೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ವಿಷ್ಣು ಪ್ರಸಾದ್ ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ವೆಚ್ಚ ಭರಿಸಲು ಕುಟುಂಬದವರು ಪರದಾಡುತ್ತಿದ್ದರು. ಸೂಕ್ತ ಸಮಯದಲ್ಲಿ ಹಣಕಾಸಿನ ನೆರವು ದೊರೆಯದ ಕಾರಣ ವಿಷ್ಣು ಪ್ರಸಾದ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಹ ನಟ ಕಿಶೋರ್ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಷ್ಣು ಪ್ರಸಾದ್ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಲಿವರ್ ಟ್ರಾನ್ಸ್ ಪ್ಲೆಂಟ್ ಚಿಕಿತ್ಸೆಗೆ ಸಿದ್ಧತೆ ನಡೆಸಲಾಗಿತ್ತು. ಲಿವರ್ ನೀಡಲು ಮಗಳು ಮುಂದಾಗಿದ್ದರು. ಆದರೆ ಶಸ್ತ್ರಚಿಕಿತ್ಸೆಗೆ 30 ಲಕ್ಷ ಅಗತ್ಯವಾಗಿದ್ದು, ಇಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ಕುಟುಂಬದ ಸದಸ್ಯರು ಹೋರಾಟ ನಡೆಸಿದ್ದರು.
ಟೆಲಿವಿಷನ್ ಮೀಡಿಯಾ ಅಸೋಸಿಯೇಷನ್ ಹಣಕಾಸಿನ ನೆರವಿಗೆ ನಿಧಿ ಸಂಗ್ರಹ ಅಭಿಯಾನ ಆರಂಭಿಸಿತ್ತು. ಆದರೆ ಹಣ ಸಂಗ್ರಹಿಸುವ ಮುನ್ನವೇ ಅವರ ಆರೋಗ್ ಸ್ಥಿತಿ ತೀರಾ ಹದಗೆಟ್ಟಿದ್ದು, ಗುರುವಾರ ರಾತ್ರಿ ಕೈಮೀರಿತ್ತು ಎಂದು ಮೂಲಗಳು ತಿಳಿಸಿವೆ.
ಕಾಸಿ (2001), ಕೈಯೆತ್ತುಮ್ ದುರಂತ್ (2002), ರನ್ ವೇ (2004), ಲಯನ್ (2006) ಪಟಾಕಾ (2006) ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಲ್ಲಿ ವಿಷ್ಣು ಪ್ರಸಾದ್ ನಟಿಸಿದ್ದರು. ಅಲ್ಲದೇ ಕಿರುತೆರೆಯಲ್ಲೂ ಸಾಕಷ್ಟು ಜನಪ್ರಿಯರಾಗಿದ್ದರು.



