ಕಾಗೆಯೊಂದು ಹೊತ್ತೊಯ್ದ ಚಿನ್ನದ ಬಳೆ ಮೂರು ವರ್ಷದ ಬಳಿಕ ಮತ್ತೆ ಮಹಿಳೆಯ ಕೈ ಸೇರಿದ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಮಲಪ್ಪುರಂನ ತ್ರಿಕ್ಕಲಂಗೋಡ್ನಲ್ಲಿ ಈ ಘಟನೆ ನಡೆದಿದ್ದು, ಮೂರು ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದಾಗ ರುಕ್ಮಿಣಿ ಎಂಬುವವರು 12 ಗ್ರಾಂ ಚಿನ್ನದ ಬಳೆಯನ್ನು ಕೈಯಿಂದ ತೆಗೆದಿಟ್ಟಿದ್ದರು. ತಕ್ಷಣ ಕಾಗೆಯೊಂದು ಅವರ ಬಳೆಯನ್ನು ಎತ್ತಿಕೊಂಡು ಹಾರಿತ್ತು.
ಮೂರು ವರ್ಷದ ಹಿಂದೆ ಬಳೆಗಾಗಿ ಸ್ವಲ್ಪ ದಿನ ಹುಡುಕಾಡಿದ ರುಕ್ಮಿಣಿ ಕುಟುಂಬಸ್ಥರು ಬಳಿಕ ಸುಮ್ಮನಾಗಿದ್ದರು. ಮೂರು ತಿಂಗಳ ಹಿಂದೆ ಅನ್ವರ್ ಸಾದತ್ ಎಂಬವರು ತೆಂಗಿನಕಾಯಿ ಕೀಳಲು ಹೋದ ವೇಳೆ ಮಗಳಿಗಾಗಿ ಮಾವು ಕೀಳಲು ಅನುಮತಿ ಪಡೆದು ಮರ ಹತ್ತಿ ಕೊಂಬೆ ಅಲ್ಲಾಡಿಸಿದ್ದಾರೆ.
ಮರ ಅಲ್ಲಾಡಿಸಿದಾಗ ಹೊಳೆಯುತ್ತಿರುವ ವಸ್ತೊಂದು ಮರದಿಂದ ಕೆಳಗೆ ಬಿದ್ದಿದ್ದು ಅನ್ವರ್ ಮಗಳು ಫಾತಿಮಾ ಹುದಾ ಗಮನಿಸಿದ್ದಾಳೆ. ಬಳಿಕ ಪರಿಶೀಲಿಸಿದಾಗ ಬಳೆ ತುಂಡಾಗಿದ್ದು ಚಿನ್ನವೆಂಬುದು ಖಚಿತವಾಗಿದೆ.
ರುಕ್ಮಿಣಿ ಅವರ ಮನೆಯಿಂದ 50 ಮೀಟರ್ ದೂರದಲ್ಲೇ ಈ ಚಿನ್ನದ ಬಳೆ ಪತ್ತೆಯಾಗಿದೆ. ಅನ್ವರ್ ಸಾದತ್ ಈ ಚಿನ್ನದ ಬಳೆಯನ್ನು ಊರಿನ ಲೈಬ್ರರಿಗೆ ಕೊಟ್ಟು ಮಾಲೀಕರನ್ನು ಹುಡುಕಿ ವಾಪಸ್ ಮಾಡುವಂತೆ ಹೇಳಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಪತಿಯೊಂದಿಗೆ ಲೈಬ್ರರಿಗೆ ತೆರಳಿದ ರುಕ್ಮಿಣಿ ಬಳೆ ತನ್ನದೇ ಎಂದು ಖಚಿತಪಡಿಸಿಕೊಂಡಿದ್ದಾರೆ. ಕಳೆದು ಹೋಗಿದ್ದ ಚಿನ್ನದ ಬಳೆ ನೋಡಿ ಒಡತಿ ರುಕ್ಮಿಣಿ ಸಂತೋಷಗೊಂಡಿದ್ದರು. ಪತ್ತೆ ಹಚ್ಚಿದವರ ಕೈಯಿಂದಲೇ ಬಳೆ ಪಡೆಯಬೇಕು ಎಂಬ ಮನವಿಯಂತೆ ಊರಿನವರು ಅನ್ವರ್ ಸಾದತ್ ಕೈಯಿಂದಲೇ ರುಕ್ಮಿಣಿ ಅವರಿಗೆ ಬಳೆಯನ್ನು ಮರಳಿ ಕೊಡಿಸಿದ್ದಾರೆ.
ಬಳೆಯನ್ನು ಪಡೆದ ರುಕ್ಮಿಣಿ ಈ ಬಳೆಯನ್ನು ಮರಳಿ ಪಡೆಯುತ್ತೇನೆ. ಸಾಮಾನ್ಯವಾಗಿ ಚಿನ್ನದ ವಸ್ತು ಕಳೆದು ಹೋದರೆ ಮತ್ತೆ ಸಿಗುವುದಿಲ್ಲ. ಸಿಕ್ಕಿದವರು ಅದನ್ನು ಬಳಸಿಕೊಳ್ಳುತ್ತಾರೆ. ಆದರೆ ಯಾರದೂ ಎಂದು ತಿಳಿಯದೇ ಇದ್ದರೂ ಸಿಕ್ಕದ ಚಿನ್ನದ ಬಳೆಯನ್ನು ವಾಪಸ್ ಮಾಡಿದ್ದಾರೆ ಎಂದು ಅನ್ವರ್ ಸಾದತ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


