ಬೆಂಗಳೂರು: 3 ಮಕ್ಕಳು ಮಾಡಿಕೊಳ್ಳುವಂತೆ ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್ ನೀಡಿರುವ ಸಲಹೆ ದೇಶದ ಅಭಿವೃದ್ಧಿಗೆ ಮಾರಕ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜನಸಂಖ್ಯೆಯ ನಿಯಂತ್ರಣ ಮತ್ತು ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿದಂತೆ 1951 ರ ಪಂಚ ವಾರ್ಷಿಕ ಯೋಜನೆಯ ಕಾಲದಿಂದ ಹಿಡಿದು 1993 ರ M S ಸ್ವಾಮಿನಾಥನ್ ಅವರ ರಾಷ್ಟ್ರೀಯ ಜನಸಂಖ್ಯಾ ನೀತಿಯಿಂದ ಮುಂದುವರೆದು 1997 ರ ಕುಟುಂಬ ಕಲ್ಯಾಣ ಯೋಜನೆಯವರೆಗೆ ಜನಸಂಖ್ಯಾ ನಿಯಂತ್ರಣ ಮತ್ತು ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ರೂಪಿಸಿವೆ ಎಂದರು.
ಜನಸಂಖ್ಯೆ ಎಂಬುದು ರಾಷ್ಟ್ರೀಯ ಸಂಪನ್ಮೂಲವಾಗಿದ್ದರೂ ಕೂಡಾ ಜನಸಂಖ್ಯಾ ಸ್ಪೋಟ ಎಂಬುದು ರಾಷ್ಟ್ರೀಯ ವಿಪತ್ತಿಗೆ ಕಾರಣವಾಗುತ್ತದೆ ಎಂಬ ಸಂಗತಿಯನ್ನು ತಜ್ಞರು ಹೇಳುತ್ತಾರೆ ಎಂದು ಅವರು ಹೇಳಿದ್ದಾರೆ.
ಜನಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಒಂದು ದೇಶದ ಜನರ ತಲಾ ಆದಾಯ ಕುಗ್ಗುತ್ತದೆ, ಅಪೌಷ್ಠಿಕತೆ ನಿರ್ವಹಣೆ ಕಷ್ಟವಾಗುತ್ತದೆ ಮತ್ತು ಸಾಕ್ಷರತೆಯ ಪ್ರಮಾಣವು ಕುಂಠಿತವಾಗುವ ಸಂಭವ ಇರುತ್ತದೆ. ಇನ್ನು ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವಾಗ ಜನರಿಗೆ ಅಸಮರ್ಪಕತೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ವಿಶ್ಲೇಷಿಸಿದರು.
ಪ್ರಸ್ತುತ ನಮ್ಮ ದೇಶದ ಜನಸಂಖ್ಯೆಯು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವಂತಹ ಈ ಸಂದರ್ಭದಲ್ಲಿ ಜಾತಿ, ಧರ್ಮವನ್ನು ಮೀರಿ ಕುಟುಂಬ ಕಲ್ಯಾಣದ ಸೂತ್ರಗಳನ್ನು ಜನರಿಗೆ ಹೇಳಬೇಕಾಗಿರುವ ವೇಳೆ RSS ಮುಖ್ಯಸ್ಥ ಮೋಹನ್ ಭಾಗವತ್ ಅವರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಸಲಹೆ ನೀಡುತ್ತಿರುವುದು ಭಾರತದಂತಹ ಅಭಿವೃದ್ಧಿಶೀಲ ದೇಶದ ಬೆಳವಣಿಗೆಗೆ ಮಾರಕವಾದಂತಹ ಅಂಶವಾಗಿದೆ ಎಂದು ಅವರು ನುಡಿದರು.
ಎಲ್ಲವನ್ನೂ ಧರ್ಮದ ಕಣ್ಣಲ್ಲಿ ನೋಡುತ್ತಾ, ದೇಶವನ್ನು ಮೌಢ್ಯತೆ ಮತ್ತು ಅವೈಜ್ಞಾನಿಕತೆಯ ಕಡೆಗೆ ಕೊಂಡೊಯ್ತುತ್ತಿರುವ ಇವರು ಇದೀಗ ತಮ್ಮ ಅವಿವೇಕದ ಸಲಹೆಗಳನ್ನು ಜನರಿಗೆ ನೀಡುತ್ತಿರುವುದನ್ನು ನಾನು ಖಂಡಿಸುತ್ತೇನೆ ಎಂದು ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ.
ಜನಸಂಖ್ಯಾ ನಿಯಂತ್ರಣ ಎಂಬುದು ಎಲ್ಲರೂ ವಿವೇಕಪೂರ್ಣವಾಗಿ ನಿರ್ಧರಿಸಬೇಕಾದ ಸಂಗತಿಯಾಗಿದ್ದು ಇದು ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಎನ್ನದೇ ಎಲ್ಲ ಪ್ರಜೆಗಳಿಗೂ ಸಮಾನವಾಗಿ ಇರಬೇಕಾದ ರಾಷ್ಟ್ರೀಯ ತಿಳುವಳಿಕೆ ಆಗಿದೆ.


