ಕಾಯಬೇಕಾದ ಅಪ್ಪನೇ ಮನೆ ತುಂಬಲು ಪತ್ನಿ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದಾನೆ ಎಂಬ ಶಂಕೆಯಲ್ಲಿ ಮಗ ತಂದೆಯನ್ನೇ ಕಲ್ಲಿನಿಂದ ಹೊಡೆದು ಕೊಂದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದ ನಿವಾಸಿ ಪಾಕಿಯನಾಥನ್ ಅಲಿಯಾಸ್ ಆರುಳನಂದ ಎಂಬಾತನನ್ನು ಮಗ ಜಾನ್ಸನ್ ಜೀವ ಕೊಲೆ ಮಾಡಿದ್ದಾನೆ.
ಜಾನ್ಸನ್ ಪತ್ನಿಯ ಜೊತೆ ಪಾಕಿಯನಾಥನ್ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಶಂಕಿಸಿ ತಂದೆ ಮತ್ತು ಮಗನ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ತಂದೆ ಜತೆ ಗಲಾಟೆ ಮಾಡಿದ ಜಾನ್ಸನ್ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ರಾಮಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಜಾನ್ಸನ್ ಒಂದು ವರ್ಷದ ಹಿಂದೆ ಮದುವೆ ಆಗಿದ್ದು, ಮದುವೆ ಆದ ಆರಂಭದಲ್ಲಿ ಚೆನ್ನಾಗಿಯೇ ಇದ್ದ. ಆದರೆ ನಂತರದ ದಿನಗಳಲ್ಲಿ ತಂದೆ ಸಂಬಂಧ ಬೆಳೆಸಿದ್ದಾನೆ ಎಂದು ಗಲಾಟೆ ಆರಂಭಿಸಿದ. ನಿನ್ನ ತಂದೆ ಆಕೆಗೂ ತಂದೆಗೆ ಸಮಾನ ಎಂದು ಹಿರಿಯರು ಸಾಕಷ್ಟು ಬುದ್ದಿವಾದ ಹೇಳಿದ್ದರು. ಆದರೆ ಇದೇ ವಿಷಯಕ್ಕೆ ತಂದೆಯನ್ನೇ ಕೊಲೆ ಮಾಡಿದ್ದಾನೆ. ದಂಪತಿಗೆ ಒಂದು ಮಗುವಿತ್ತು.
ಹೆಣ್ಣು ಮಗು ಜನಿಸಿದ್ದಕ್ಕೆ 2 ತಿಂಗಳ ಶಿಶು ಕಾಲುವೆಗೆ ಎಸೆದ ತಾಯಿ
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿ ಹೆಣ್ಣು ಮಗು ಎಂಬ ಕಾರಣಕ್ಕೆ ಎರಡು ತಿಂಗಳ ಶಿಶುವನ್ನು ತಾಯಿ ಕಾಲುವೆಗೆ ಎಸೆದಿರುವ ಘಟನೆ ಇತ್ತೀಚೆಗೆ ನಡೆದಿದೆ.
ಆರೋಪಿ ತಾಯಿ ಪ್ರಿಯಾಂಕಾ ದೇವಿ ಎಂಬಾಕೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಪ್ರಿಯಾಂಕಾ ದೇವಿ ಮತ್ತು ಪತಿ ಸರೋಜ್ ಕುಮಾರ್ ಬಿಹಾರದವರಾಗಿದ್ದು, ತೋರಣಗಲ್ಲಿನಲ್ಲಿ ವಾಸವಾಗಿದ್ದರು.
ಸರೋಜ್ ಕುಮಾರ್ ಜಿಂದಾಲ್ ಕಂಪನಿಯಲ್ಲಿ ಸೂಪರ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ದಂಪತಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿವೆ.
ಪ್ರಿಯಾಂಕಾ ದೇವಿ ಮಗು ಕಾಣೆಯಾಗಿದೆ ಎಂದು ಗೋಳಾಡಿದ್ದಳು. ಪತಿ ಸರೋಜ್ ಕುಮಾರ್ ತೋರಣಗಲ್ ಪೊಲೀಸ್ ಠಾಣೆಯಲ್ಲಿ ಮಗು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ. ತಾಯಿಯೇ ಶಿಶುವನ್ನು ಎತ್ತಿಕೊಂಡು ಹೋಗಿರುವುದು ಪತ್ತೆಯಾಗಿತ್ತು.



