ತೃಣಮೂಲ ಕಾಂಗ್ರೆಸ್ ಪಕ್ಷದ ಬಂಡಾಯ ಸಂಸದರ ಬಣ ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿ (ಎನ್ ಸಿಪಿಐ) ಜೊತೆ ವಿಲೀನಗೊಳ್ಳಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಭಾನುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಟಿಎಂಸಿಯ 20 ಸಂಸದರ ಬಣ ಭೇಟಿ ಮಾಡಿದ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಈ ವಿಷಯ ತಿಳಿಸಿದ್ದಾರೆ.
ಪಕ್ಷದಲ್ಲಿ ನಮ್ಮ ಬಲ ಮೂರನೇ ಎರಡು ಭಾಗದಷ್ಟಿದೆ. ನಾವು ಲೋಕಸಭೆಯಲ್ಲಿ ಪ್ರತ್ಯೇಕ ಆಸನದ ಬೇಡಿಕೆ ಇಟ್ಟಿದ್ದೇವೆ. ನಾವು ಪ್ರಧಾನಿ ಮೋದಿ ಅವರ ಜೊತೆ ಕೈ ಜೋಡಿಸಿ ಕೆಲಸ ಮಾಡಲು ನಾವು ಎನ್ ಡಿಎ ಜೊತೆ ಇರಲಿದ್ದೇವೆ ಎಂದು ಅವರು ಹೇಳಿದರು.
ಲೋಕಸಭೆಯಲ್ಲಿ ಟಿಎಂಸಿ ಒಟ್ಟಾರೆ ಬಲ 28 ಸಂಸದರು ಆಗಿತ್ತು. ಆದರೆ ಇದೀಗ 20 ಸಂಸದರು ಹೊರ ಹೋಗಲು ಸಜ್ಜಾಗಿದ್ದು, ಈ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಮುಂಬರುವ ಲೋಕಸಭಾ ಅಧಿವೇಶನದಲ್ಲಿ ಪ್ರತಿಪಕ್ಷಗಳ ಬಲ ಮತ್ತಷ್ಟು ಕಡಿಮೆ ಆಗಲಿದೆ.
ಟಿಎಂಸಿ ವರಿಷ್ಠೆ ಹಾಗೂ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ಆಪ್ತ ಹಾಗೂ ಪಕ್ಷದ ಹಿರಿಯ ಮುಖಂಡ ಸುದೀಪ್ ಬಂಡೋಪಾಧ್ಯಾಯ ಕೂಡ ಇದೀಗ ಬಂಡಾಯ ಸಂಸದರ ಜೊತೆ ಕೈ ಜೋಡಿಸಿದ್ದು, ಮಮತಾ ಬ್ಯಾನರ್ಜಿಗೆ ನುಂಗಲಾರದ ತುತ್ತಾಗಿದೆ.
ಪಕ್ಷದಿಂದ ಹೊರಬಂದ ಮೊದಲ ದಿನವೇ ನಾವು ಪಕ್ಷದ ಚಿಹ್ನೆಗೆ ಬೇಡಿಕೆ ಸಲ್ಲಿಸಲು ಆಗುವುದಿಲ್ಲ. ನಮ್ಮ ಬಲ ಮೂರನೇ ಎರಡು ಭಾಗದಷ್ಟಿದ್ದರೂ ನಾವು ಜುಲೈನಲ್ಲಿ ಪಕ್ಷದ ಚಿಹ್ನೆಗಾಗಿ ಪೈಪೋಟಿ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.



