ರಾಜಧಾನಿ ಬೆಂಗಳೂರು ಹುಸಿ ಬಾಂಬ್ ಗಳ ಕರೆ ಮಾಡಿ ಬೆದರಿಸುತ್ತಿರುವವ ಸಂಖ್ಯೆಯಲ್ಲಿ ದೇಶದಲ್ಲಿ ನಂ.1 ಸ್ಥಾನ ಪಡೆದಿದೆ. ಈ ಹಿನ್ನೆಲೆಯಲ್ಲಿ ತಡವಾಗಿ ಎಚ್ಚೆತ್ತ ಪೊಲೀಸ್ ಇಲಾಖೆ ಹುಸಿಕರೆಗಳನ್ನು ಮಟ್ಟಹಾಕಲು ಎಸ್ ಐಟಿ ತನಿಖೆಗೆ ಮುಂದಾಗಿದೆ.
ಬೆಂಗಳೂರಿನಲ್ಲಿ ದಿನೇದಿನೆ ಹುಸಿ ಬಾಂಬ್ ಕರೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಎಂ, ಡಿಸಿಎಂ ಮನೆಗಳನ್ನೂ ಬಿಡುತ್ತಿಲ್ಲ. ಇದರಿಂದ ಪೊಲೀಸರಿಗೆ ತಲೆನೋವು ಹೆಚ್ಚಾಗಿದೆ.
ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಕೆಲ ಶಾಲೆಗಳು, ಸರ್ಕಾರಿ ಕಚೇರಿ ಹಾಗೂ ದೇವಸ್ಥಾನಗಳಿಗೆ ಬಾಂಬ್ ಬೆದರಿಕೆ ಬರುತ್ತಿದ್ದು, ಇದೀಗ ಸಿಎಂ ಡಿಸಿಎಂ ಮನೆಗಳನ್ನೂ ಬಿಡದೇ ಹುಸಿ ಹುಸಿ ಬಾಂಬ್ ಕರೆಗಳ 34 ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿದ್ದು, ದೇಶದಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಮುಂಬೈನಲ್ಲಿ 27, ಚೆನ್ನೈ 22 ಪ್ರಕರಣಗಳು ದಾಖಲಾಗಿದ್ದು, ನಂತರದ ಸ್ಥಾನದಲ್ಲಿವೆ.
ಹುಸಿ ಬಾಂಬ್ ಬೆದರಿಕೆಗಳನ್ನು ತಪ್ಪಿಸಲು ಹಾಗೂ ಹುಸಿ ಬೆದರಿಕೆ ಹಾಕುವ ಕಿಡಿಗೇಡಿಗಳ ಪತ್ತೆಗೆ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ತನಿಖಾ ತಂಡ ರಚನೆ ಮಾಡಿ ಆದೇಶಿಸಿದ್ದಾರೆ.
ಶನಿವಾರ ಬೆಳಗಿನ ಜಾವ 4:20ರ ಸುಮಾರಿಗೆ, ಆರ್ನಾ ಅಶ್ವಿನ್ ಶೇಖರ್ (aarna.ashwinshekher@outlook.com) ಮೇಲ್ ಐಡಿಯಿಂದ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಇಮೇಲ್ ಐಡಿ (cm.kar@nic.in) ಮತ್ತು ಡಿಸಿಎಂ ಅವರ ವೈಯಕ್ತಿಕ ಇಮೇಲ್ ಐಡಿ dkshivakumar1@gmail.com ಗೆ ಇಮೇಲ್ ಬೆದರಿಕೆ ಸಂದೇಶ ಬಂದಿತ್ತು.
ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ಸಿಎಂ ಮತ್ತು ಡಿಸಿಎಂ ಅವರ ನಿವಾಸಗಳನ್ನು ಸಂಪೂರ್ಣ ಶೋಧ ನಡೆಸಲಾಗಿತ್ತು. ಬಳಿಕ ಹುಸಿ ಬಾಂಬ್ ಬೆದರಿಕೆ ಅನ್ನೋದು ಗೊತ್ತಾಯ್ತು. ಬಳಿಕ ಅರ್ನಾ ಅಶ್ವಿನ್ ಶೇಖರ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬೆನ್ನಲ್ಲೇ ಎಸ್ಐಟಿ ರಚಿಸಲಾಗಿದೆ.
ಬಂಗಾಳದಲ್ಲಿ ಓರ್ವನ ಬಂಧನ
ಕಳೆದ ವರ್ಷ ಅಕ್ಟೋಬರ್ 4ರಂದು ಬಸವನಗುಡಿಯ ಬಿಐಟಿ ಕಾಲೇಜಿಗೆ ಇ-ಮೇಲ್ ಮೂಲಕ ಆರೋಪಿಯು ಬಾಂಬ್ ಬೆದರಿಕೆ ಹಾಕಿದ್ದ. ಕಾಲೇಜು ಆವರಣದಲ್ಲೇ ಹೈಡ್ರೋಜನ್ ಸುಧಾರಿತ ಐಇಡಿ ಇಟ್ಟಿದ್ದು, ಅದನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ವಿವಿ ಪುರಂ ಪೊಲೀಸರು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿ ಆರೋಪಿಯನ್ನ ಬಂಧಿಸಿದ್ದರು.
ಆರೋಪಿಯಿಂದ ಲ್ಯಾಪ್ಟಾಪ್, ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ಆರೋಪಿ ಇದೇ ರೀತಿ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ಬೆಳಕಿಗೆ ಬಂದಿತ್ತು. ಇದಕ್ಕೂ ಮುನ್ನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಡಿಕೆಶಿ ಮನೆ ಎದುರಿನ ಶಾಲೆಗೂ ಬಾಂಬ್ ಬೆದರಿಕೆ ಬಂದಿತ್ತು.


