ಬೆಂಗಳೂರು: ಟವರ್ ಗಳಲ್ಲಿ ತಾಮ್ರದ ತಂತಿಗಳನ್ನು ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೆಕಾನಿಕ್ ಬಂಧಿಸಿರುವ ಕೋಣನಕುಂಟೆ ಪೊಲೀಸರು 3.10ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.
ಪಿಳ್ಳಗಾನಹಳ್ಳಿಯ ಕೋಳಿಫಾರಂ ಲೇಔಟ್ ನ ಅರ್ಬಾಜ್ ಪಾಷಾ (25) ಬಂಧಿತ ಆರೋಪಿ. ಆತನಿಂದ 10 ಕೆ.ಜಿ ತಾಮ್ರದ ತಂತಿ, 7 ದ್ವಿ ಚಕ್ರ ವಾಹನಗಳು ಸೇರಿ 3.10ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಅನಿತಾ ಹದ್ದಣ್ಣವರ್ ತಿಳಿಸಿದ್ದಾರೆ.
ಬನ್ನೇರುಘಟ್ಟ ಮುಖ್ಯ ರಸ್ತೆಯ ಗುರಪ್ಪನ ಪಾಳ್ಯದ ಅಮೃತ್ ಅವರು ಇಂಡಸ್ ಟವರ್ಸ್ ಲಿಮಿಟೆಡ್ ಕಂಪನಿಯ ಟವರ್ ನಲ್ಲಿ ಅಳವಡಿಸಿದ್ದ ತಾಮ್ರದ ಕೇಬಲ್ ಕಳ್ಳತನ ಮಾಡಿರುವ ಸಂಬಂಧ ನೀಡಿದ ದೂರು ದಾಖಲಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಸಿಸಿ ಕ್ಯಾಮೇರಾ ಗಳನ್ನು ಪರಿಶೀಲನೆ ಮಾಡಿ ಖಚಿತ ಮಾಹಿತಿಯನ್ನು ಕಲೆ ಹಾಕಿ ಆರೋಪಿಯನ್ನು ಕೋಳಿಫಾರಂ ಲೇಔಟ್ ನ ಅಕ್ಷಾ ಮಸೀದಿ ಬಳಿ ಬಂಧಿಸಲಾಗಿದೆ.
ಬಂಧಿತ ಆರೋಪಿಯು ಕೋಣನಕುಂಟೆ, ತಲಘಟ್ಟಪುರ, ಕುಮಾರಸ್ವಾಮಿ ಲೇಔಟ್ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಾಹನ ಕಳವು ಹಾಗೂ ಟವರ್ ಕಂಬಗಳಲ್ಲಿ ಕಾಪರ್ ವೈರ್ ಕಳವು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಬಾಯ್ಬಿಟ್ಟಿದ್ದಾನೆ. ಕೋಣನಕುಂಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮತ್ತವರ ಸಿಬ್ಬಂದಿಯು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.



