ಬಾಗಲಕೋಟೆ: ರಾಹುಲ್ ಗಾಂಧಿಯವರು ಪಾಕಿಸ್ತಾನ ಹಾಗೂ ಚೀನಾದ ಎಜೆಂಟರ್ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ಬಾಗಲಕೋಟೆಯಲ್ಲಿ ನಡೆದ ಘಟನೆ ಹಿನ್ನಲೆಯಲ್ಲಿ ನಾನಾ ಸ್ಥಳಗಳಿಗೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ದೇಶದಲ್ಲೆಡೆ ನಡೆಯುತ್ತಿರುವ ಕೃತ್ಯಗಳಿಗೆ ಕಾಂಗ್ರೆಸ್ ನೇರ ಕಾರಣ. ನರೇಂದ್ರ ಮೋದಿ ಅವರ ಹೆಸರು ಕೆಡಿಸುವ ಉದ್ದೇಶದಿಂದ ಇಂತಹ ಕೃತ್ಯಗಳನ್ನು ಮಾಡಿಸುತ್ತಿದ್ದಾರೆ.
ಲೋಕಸಭೆಯಲ್ಲಿಯೇ ದಲಿತ ಮಹಿಳಾ ಸಂಸದರನ್ನು ಎತ್ತಿಕಟ್ಟಿದ್ದು, ಇದೇ ರಾಹುಲ್ ಗಾಂಧಿ. ಕಾಂಗ್ರೆಸ್ ಮೊದಲೇ ಬತ್ತಲೆ ಆಗಿದೆ. ಹೀಗಾಗಿಯೇ ಎಐ ಕಾರ್ಯಕ್ರಮದಲ್ಲೂ ಹಾಗೆಯೇ ನಡೆದುಕೊಂಡಿದ್ದಾರೆ ಎಂದರು.
ಭಾರತ ಜಗತ್ತಿನ ನಾಲ್ಕನೇ ದೊಡ್ಡ ರಾಷ್ಟ್ರವಾಗಿದ್ದು, ಅತೀ ಬೇಗ ಮೂರನೇ ಸ್ಥಾನಕ್ಕೆ ಬರುತ್ತದೆ. ಅದನ್ನು ಸಹಿಸಿಕೊಳ್ಳಲು ಆಗದೇ ಕಾಂಗ್ರೆಸ್ ಈ ರೀತಿ ಕೃತ್ಯಗಳನ್ನು ಮಾಡಿಸುತ್ತಿದೆ ಎಂದು ದೂರಿದ ಅವರು, ದೇಶದ್ರೋಹಿ ಹಿಂದೂಗಳು ಇವರ ಜತೆಗೆ ಸೇರಿಕೊಂಡಿದ್ದಾರೆ. ಅವರಿಗೆ ಶಾಸಕರಾಗಬೇಕು. ಸಚಿವರಾಗಬೇಕು ಎಂಬುದು ಬಿಟ್ಟು ಬೇರೇನೂ ಕಾಣುತ್ತಿಲ್ಲ ಎಂದು ತಿಳಿಸಿದರು.
ಬಿಜೆಪಿಯವರು ಹಿಂದೆ ಅಧಿಕಾರದಲ್ಲಿದ್ದಾಗಲೂ ಕೆ.ಜೆ.ಹಳ್ಳಿ, ಹುಬ್ಬಳ್ಳಿ ಘಟನೆಗಳು ನಡೆದವು. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಮಂತ್ರಿ ಅರಗ ಜ್ಞಾನೇಂದ್ರ ಹಿಂದೂಗಳ ರಕ್ಷಣೆಗೆ ನಿಲ್ಲಲಿಲ್ಲ. ಹೀಗಾಗಿಯೇ ಬಿಜೆಪಿ ಸೋತಿದೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.
ವಿಜಯೇಂದ್ರ ಸಿಎಂ ಆಗಲ್ಲ
ರಾಜ್ಯದಲ್ಲಿ ಸೂರ್ಯ ಚಂದ್ರ ಇರುವವರೆಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಿಎಂ ಆಗಲ್ಲ. ನಮ್ಮ ಹಿಂದೂಗಳ ರಕ್ಷಣೆ ಮಾಡುವಂತ ಜೆಸಿಬಿ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದರು.
ಜೆಸಿಬಿ ಪಕ್ಷ ಕಟ್ಟುವುದು ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾದು ನೋಡುವುದೇ? ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ ಇಡುವೆ ಎಂದ ಅವರು, ಮುಂದಿನ ದಿನಗಳಲ್ಲಿ ಬಿಜೆಪಿಯವರಿಗೆ ಜ್ಞಾನೋದಯವಾಗಿ ನನ್ನನ್ನು ಪಕ್ಷಕ್ಕೆ ಕರೆದು ಸಿಎಂ ಮಾಡುವುದಾಗಿ ಹೇಳಿದರೆ ಹೋಗುವೆ. ಇಲ್ಲದಿದ್ದರೆ ಹೊಸ ಪಕ್ಷ ಕಟ್ಟುವುದು ಗ್ಯಾರಂಟಿ. ನಾನು ಸಮ್ಮನೇ ಆ ಪಕ್ಷಕ್ಕೆ ಹೋಗಿ ವಿಜಯೇಂದ್ರರನ್ನು ಸಿಎಂ ಮಾಡಲೇ ಎಂದು ಪ್ರಶ್ನಿಷಸಿದರು.



