ಹಗ್ಗಜಗ್ಗಾಟದ ನಂತರ ಕೊನೆಗೂ ಡಿಕೆ ಶಿವಕುಮಾರ್ ಜೊತೆ ಪ್ರಮಾಣ ವಚನ ಸ್ವೀಕರಿಸಲಿರುವ ಶಾಸಕರ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ.
ದೆಹಲಿಯಲ್ಲಿ ಸುದೀರ್ಘ ಎರಡು ದಿನಗಳ ಚರ್ಚೆಯ ನಂತರ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಸೇರಲಿರುವ ಶಾಸಕರ ಪಟ್ಟಿ ಪ್ರಕಟಿಸಲಾಗಿದ್ದು, ಜಿ.ಪರಮೇಶ್ವರ್ ಡಿಸಿಎಂ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.
ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆಡಿಯೋ ವೈರಲ್ ನಿಂದ ಮುಜುಗರಕ್ಕೆ ಒಳಗಾಗಿರುವ ಜಮೀರ್ ಅಹ್ಮದ್ ಖಾನ್ ಗೆ ಮೊದಲ ಹಂತದ ಸಚಿವ ಸಂಪುಟದಲ್ಲಿ ಸ್ಥಾನ ಕೈ ತಪ್ಪಿದೆ.
ಆರಂಭದಲ್ಲಿ ಕೇವಲ ಮುಖ್ಯಮಂತ್ರಿ ಹುದ್ದೆಯನ್ನಷ್ಟೇ ಸೃಷ್ಟಿಸಲು ಯೋಚಿಸಿದ್ದ ಕಾಂಗ್ರೆಸ್ (Congress) ಹೈಕಮಾಂಡ್ ಸುದೀರ್ಘ ಚರ್ಚೆಗಳ ನಂತರ ಪಕ್ಷದ ಒಗ್ಗಟ್ಟು ಮತ್ತು ಪ್ರಮುಖ ಸಮುದಾಯಗಳ ಪ್ರಾತಿನಿಧ್ಯವನ್ನು ಬ್ಯಾಲೆನ್ಸ್ ಮಾಡಲು ಕೊನೆಗೂ ‘ಡಿಸಿಎಂ’ ಸೂತ್ರಕ್ಕೆ ಶರಣಾಗಿದೆ.
ಡಾ. ಜಿ. ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ಸಿಗುವಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಅತ್ಯಂತ ದೊಡ್ಡದಾಗಿದೆ. “ಪರಮೇಶ್ವರ್ ಅವರು ಸತತ 8 ವರ್ಷಗಳ ಕಾಲ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದವರು. ರಾಜ್ಯದ ಅತ್ಯಂತ ಪ್ರಭಾವಿ ದಲಿತ ನಾಯಕರಾಗಿರುವ ಅವರಿಗೆ ಗೌರವಯುತ ಸ್ಥಾನ ಸಿಗಲೇಬೇಕು” ಎಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಗಟ್ಟಿಯಾದ ಪಟ್ಟು ಹಿಡಿದಿದ್ದರು. ಸಿದ್ದರಾಮಯ್ಯ ಅವರ ಈ ಒತ್ತಡಕ್ಕೆ ಹೈಕಮಾಂಡ್ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ.
ಸಭಾಧ್ಯಕ್ಷ ಸ್ಥಾನ ಅಲಂಕರಿಸಿದ್ದ ಯುಟಿ ಖಾದರ್ ಗೆ ಸಚಿವ ಸ್ಥಾನ ಒಲಿದಿದೆ. ಈ ಮೂಲಕ ಸ್ಪೀಕರ್ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಸಂಪುಟ ಸೇರಲಿರುವ 14 ಮಂದಿ ವಿವರ
ಡಿಕೆ ಶಿವಕುಮಾರ್
ಜಿ.ಪರಮೇಶ್ವರ್
ಕೃಷ್ಣ ಬೈರೇಗೌಡ
ಕೆ ಎಚ್ ಮುನಿಯಪ್ಪ
ಕೆಜೆ ಜಾರ್ಜ್
ಎಂಬಿ ಪಾಟೀಲ್
ರಾಮಲಿಂಗಾರೆಡ್ಡಿ
ಸತೀಶ್ ಜಾರಕಿಹೊಳಿ
ಪ್ರಿಯಾಂಕ್ ಖರ್ಗೆ
ಯುಟಿ ಖಾದರ್
ಈಶ್ವರ್ ಖಂಡ್ರ
ಬೈರತಿ ಸುರೇಶ್
ಶರಣು ಪ್ರಕಾಶ್ ಪಾಟೀಲ್
ಯತೀಂದ್ ಸಿದ್ದರಾಮಯ್ಯ



