ಮಧ್ಯಮ ವೇಗಿ ಅರ್ಷದ್ ಖಾನ್ ಕೊನೆಯ ಹಂತದಲ್ಲಿ ಒಂದೇ ಓವರ್ ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಭಾರತ `ಎ’ ತಂಡ 8 ರನ್ ಗಳಿಂದ ಶ್ರೀಲಂಕಾ ಎ ವಿರುದ್ಧ ರೋಚಕ ಜಯ ಸಾಧಿಸಿದೆ.
ಡಂಬುಲಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಋತುರಾಜ್ ಗಾಯಕ್ವಾಡ್ ಶತಕದ ಸಹಾಯದಿಂದ 6 ವಿಕೆಟ್ ಗೆ 277 ರನ್ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಶ್ರೀಲಂಕಾ ಎ ತಂಡ ಕೊನೆಯ ಹಂತದಲ್ಲಿ ಮುಗ್ಗರಿಸಿ 48.5 ಓವರ್ ಗಳಲ್ಲಿ 269 ರನ್ ಗೆ ಆಲೌಟಾಯಿತು.
ನಿರೋಶನ್ ಡಿಕ್ವೆಲ್ಲಾ (47) ಮತ್ತು ಅವಿಷ್ಕಾ ಫೆರ್ನಾಂಡೊ (45) ಮೊದಲ ವಿಕೆಟ್ ಗೆ 93 ರನ್ ಪೇರಿಸಿ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇವರಿಬ್ಬರು ಆಯುಷ್ ಬದೋನಿ ವಿಕೆಟ್ ಒಪ್ಪಿಸುವ ಮೂಲಕ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು.
ನಂತರ ಬಂದ ನುವೆಂಡೊ ಫೆರ್ನಾಂಡೊ (8) ವಿಫಲರಾದರೆ, ಸಧೀರ ಸಮರವಿಕ್ರಮ ಮತ್ತು ನಾಯಕ ಸಹನ್ ಅರಚಿಗೆ 78 ರನ್ ಜೊತೆಯಾಟದಿಂದ ಹೋರಾಟ ನಡೆಸಿದರು. ಸಮರವಿಕ್ರಮ (46) ಕೂಡ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದ ಸಹನ್ 72 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸೇರಿ 74 ರನ್ ಬಾರಿಸಿದರು. ಸಹನ್ ಔಟಾದಾಗ ತಂಡ 15 ರನ್ ಗಳಿಸಬೇಕಿದ್ದು, ಕೈಯಲ್ಲಿ ಮೂರು ವಿಕೆಟ್ ಹೊಂದಿತ್ತು. ಆದರೆ ಅರ್ಷದ್ ಖಾನ್ ಓವರ್ ನಲ್ಲಿ 3 ವಿಕೆಟ್ ಕಳೆದುಕೊಳ್ಳುವ ಮೂಲಕ 8 ರನ್ ಗಳಿಂದ ಸೋಲುಂಡಿತು.
ವೈಭವ್ ನಿರಾಸೆ, ಗಾಯಕ್ವಾಡ್ ಶತಕ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ಎ ತಂಡ ಸ್ಫೋಟಕ ಬ್ಯಾಟ್ಸ್ ಮನ್ ವೈಭವ್ ಸೂರ್ಯವಂಶಿ (14) ಮತ್ತು ಪ್ರಭಸಿಮ್ರನ್ ಸಿಂಗ್ (2) ಬೇಗನೇ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಪ್ರಿಯಾಂಶು ಆರ್ಯ ಗೊಂದಲ ಮಾಡಿಕೊಂಡು (32) ರನೌಟ್ ಆಗಿ ನಿರಾಸೆ ಮೂಡಿಸಿದರು.
ನಾಲ್ಕನೇ ವಿಕೆಟ್ ಗೆ ಜೊತೆಯಾದ ಋತುರಾಜ್ ಗಾಯಕ್ವಾಡ್ ಮತ್ತು ನಾಯಕ ತಿಲಕ್ ವರ್ಮಾ 150 ರನ್ ಜೊತೆಯಾಟದಿಂದ ತಂಡವನ್ನು ಹಳಿಗೆ ತಂದು ನಿಲ್ಲಿಸಿದರು.
ಗಾಯಕ್ವಾಡ್ 114 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 101 ರನ್ ಬಾರಿಸಿ ಶತಕದ ಗೌರವಕ್ಕೆ ಪಾತ್ರರಾದರೆ, ತಿಲಕ್ ವರ್ಮಾ 97 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 60 ರನ್ ಬಾರಿಸಿದರು.
ನಂತರ ಆಯುಷ್ ಬದೋನಿ (24) ಮತ್ತು ಸೂರ್ಯವಂಶ್ ಶಿಂಧೆ (26) ಉಪಯುಕ್ತ ಕಾಣಿಕೆ ನೀಡಿದ ತಂಡದ ಮೊತ್ತವನ್ನು ಉಬ್ಬಿಸಿದರು.



