ಮುಂಬೈ: ಅನುಮಾನ ಪಿಶಾಚಿ ಹಿಡಿದಿದ್ದ ಗಂಡ, ಅತ್ತೆ-ಮಾವನ ಕಿರುಕುಳ ತಾಳಲಾರದೇ ಮದುವೆಯಾದ 48 ದಿನಕ್ಕೆ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಥಾಣೆಯ ಅಂಬರನಾಥ್ ನಿವಾಸಿ ವಿಶಾಲ್ ತಿಲ್ಕರ್ (26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ ಹಾಗೂ ಗಂಡನ ಅನುಮಾನದಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿಯ ಪ್ರತಿಯೊಂದು ಚಟುವಟಿಕೆ ಗಮನಿಸಲು ಡಾಕ್ಟರ್ ಹುದ್ದೆಯಲ್ಲಿದ್ದ ಗಂಡ ನಿತಿನ್ ತಿಲ್ಕರ್ ಬೆಡ್ ರೂಮ್ ನಲ್ಲಿ ಸಿಸಿಟಿವಿ ಇರಿಸಿದ್ದ. ಪಕ್ಕದ ಮನೆಯ ಹುಡುಗನ ಜೊತೆ ಔಪಚಾರಿಕವಾಗಿ ಮಾತನಾಡಿದ್ದಕ್ಕೆ ಹೊಡೆದು ಬಡಿದು ಮಾಡಿದ್ದ ಎಂದ ಆರೋಪಿಸಲಾಗಿದೆ.
ಮದುವೆಯ ಸಮಯದಲ್ಲಿ ಮಹಿಳೆ ಕುಟುಂಬದಿಂದ ತಾವು ನಿರೀಕ್ಷಿಸಿದಷ್ಟು ವರದಕ್ಷಿಣೆ ಸಿಗಲಿಲ್ಲವೆಂದು ಗಂಡನ ಮನೆಯವರು ಕೋಪಗೊಂಡಿದ್ದರು. ಅಷ್ಟೇ ಅಲ್ಲದೇ, ವಿಶಾಖಾ ಅವರಿಗೆ ತವರು ಮನೆಯಿಂದ ಚಿನ್ನ ಮತ್ತು ಹಣ ತೆಗೆದುಕೊಂಡು ಬರುವಂತೆ ಒತ್ತಾಯಿಸಿ ಮಾನಸಿಕ ಕಿರುಕುಳ ಕೊಡುತ್ತಿದ್ದರು.
ಈ ಮಧ್ಯೆ ವಿಶಾಖಾ ನಡೆ ಬಗ್ಗೆ ಅನುಮಾನಗೊಂಡಿದ್ದ ತಿಲ್ಕರ್ ತನ್ನ ಹೆಂಡ್ತಿ ಏನ್ ಮಾಡ್ತಾಳೆ? ಯಾರೊಂದಿಗಾದರೂ ಮಾತನಾಡುತ್ತಿದ್ದಾಳಾ? ಎಂದು ನಿಗಾ ಇಡೋಕೆ ಮನೆ ಒಳಗೂ, ಹೊರಗೂ ಸಿಸಿಟಿವಿ ಅಳವಡಿಸಿದ್ದ. ಒಂದು ವೇಳೆ ವಿಶಾಖಾ ಯಾರೊಂದಿಗಾದರೂ ಮಾತನಾಡಿದರೆ ಮನೆಗೆ ಬಂದು ಮನಬಂದಂತೆ ಹೊಡೆಯುತ್ತಿದ್ದ. ಆತ್ಮಹತ್ಯೆಗೆ ಶರಣಾಗುವ ಎರಡು ದಿನಗಳ ಮುನ್ನ ಮನೆಯ ಹತ್ತಿರದ ಮಹಿಳೆಯೊಬ್ಬರ ಜೊತೆ ಮಾತನಾಡಿದ್ದಕ್ಕಾಗಿ ವಿಶಾಖಾ ಅವರ ಮೇಲೆ ಆಕೆಯ ಪತಿ ದೈಹಿಕವಾಗಿ ಹಲ್ಲೆ ನಡೆಸಿದ್ದ ಎನ್ನಲಾಗಿದೆ.
ಈ ಹಿಂಸೆಯನ್ನು ತಾಳಲಾರದೇ ವಿಶಾಖಾ ಅವರು ತಮ್ಮ ತಾಯಿಗೆ ಕರೆ ಮಾಡಿ ಎಲ್ಲಾ ವಿಷಯವನ್ನು ಹೇಳಿಕೊಂಡಿದ್ದರು. ಮಗಳ ಕಷ್ಟ ಕೇಳಿ ಆಘಾತಕ್ಕೊಳಗಾಗಿದ್ದ ಪೋಷಕರು ಆಕೆಯನ್ನು ಮರಳಿ ಮನೆಗೆ ಕರೆತರಲು ಚಿಂತನೆ ನಡೆಸಿದ್ದರು. ಈ ನಡುವೆ ವಿಶಾಖಾ ನೇಣಿಗೆ ಶರಣಾಗಿದ್ದಾರೆ. ಹೆತ್ತ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಸಂಬಂಧ ಅಂಬರನಾಥ್ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ವಿಶಾಖಾ ಅವರ ಪತಿ ನಿತಿನ್ ತಿಲ್ಕರ್, ಅತ್ತೆ ಛಾಯಾ ಮತ್ತು ಮೈದುನ ನಿನಾದ್ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಈಗಾಗಲೇ ಪತಿ ನಿತಿನ್ನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದ ಇಬ್ಬರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.



