ಬೆಂಗಳೂರು:ಮೇಕೆದಾಟು ಯೋಜನೆ ಸಂಬಂಧಿಸಿದಂತೆ ತಮಿಳುನಾಡು ದ್ವಿಪಕ್ಷೀಯ ಮಾತುಕತೆಗೆ ಮುಂದಾದರೆ ನಾವು ಸಿದ್ಧರಾಗಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಮಾತುಕತೆಗೆ ತಮಿಳುನಾಡು ಮುಂದಾದರೆ, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಬಾಕಿ ಉಳಿದಿರುವ ವಿಷಯಗಳನ್ನು ಪರಿಹರಿಸಲು ಕರ್ನಾಟಕ ಖಂಡಿತವಾಗಿಯೂ ಈ ಅವಕಾಶವನ್ನು ಬಳಸಿಕೊಳ್ಳುತ್ತದೆ ಎಂದು ಅವರು ಶನಿವಾರ ವಿಧಾನಸೌಧಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ತಮಿಳುನಾಡು ಮಾತುಕತೆಗೆ ಮುಂದಾದರೆ ಅವರೊಂದಿಗೆ ಚರ್ಚೆ ನಡೆಸಲು ಕರ್ನಾಟಕ ಸರ್ಕಾರ ಸಂಪೂರ್ಣ ಸಿದ್ಧವಿದೆ” ಎಂದು ಸ್ಪಷ್ಟಪಡಿಸಿದ್ದಾರೆ.ಮೇಕೆದಾಟು ಯೋಜನೆ ಮಹತ್ವಾಕಾಂಕ್ಷೆಯ ಯೋಜನೆ. ಹೊಸ ಡ್ಯಾಮ್ ಕಟ್ಟಬೇಕಿದೆ. ಇದು ಸ್ಟೋರೇಜ್ಗಾಗಿ ಮಾತ್ರ. ವ್ಯವಸಾಯಕ್ಕೆ ಇದು ಉಪಯೋಗ ಆಗಲ್ಲ” ಎಂದರು.
ಸಾಮಾನ್ಯ ಜಲ ವರ್ಷದಲ್ಲಿ ಕರ್ನಾಟಕವು ಬಿಳಿಗುಂಡ್ಲುವಿನಲ್ಲಿ 177.25 ಟಿಎಂಸಿ ನೀರನ್ನು ವಾರ್ಷಿಕವಾಗಿ ತಮಿಳುನಾಡು ರಾಜ್ಯಕ್ಕೆ ಹರಿಸಬೇಕಾಗಿರುತ್ತದೆ. ಕರ್ನಾಟಕ ರಾಜ್ಯ ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ ಜೂನ್ ತಿಂಗಳಲ್ಲಿ 9.19 ಟಿಎಂಸಿ ನೀರು ಖಾತ್ರಿಪಡಿಸಬೇಕಾದ ಹರಿವಾಗಿದೆ. ಪ್ರಸ್ತುತ ಜಲವರ್ಷದಲ್ಲಿ (2026-27) ಜೂನ್ ತಿಂಗಳಲ್ಲಿ ಬಿಳುಗುಂಡ್ಲುವಿನಲ್ಲಿ ಮಾಪನ ಮಾಡಲಾದ ನೀರಿನ ಹರಿವಿನ ಪ್ರಮಾಣ 2.068 ಟಿಎಂಸಿಯಾಗಿದೆ” ಎಂದು ತಿಳಿಸಿದರು.
ತಮಿಳುನಾಡಿನವರು ಒಂದು ನಿರ್ಣಯ ಮಾಡಿದ್ದಾರೆ. ಮರುಪರಿಶೀಲನಾ ಪಿಟಿಷನ್ ಹಾಕಿದ್ದರು. ಅದು ಕೂಡ ರಿಜೆಕ್ಟ್ ಆಗಿದೆ. ಡ್ಯಾಮ್ ಕಟ್ಟಬೇಕು. ಇದರಲ್ಲಿ 67 ಟಿಎಂಸಿ ನೀರನ್ನು ಸಂಗ್ರಹಿಸಲಾಗುತ್ತದೆ. ಇದರಿಂದ 400 ಮೆಗಾ ವ್ಯಾಟ್ ವಿದ್ಯುತ್ ಪೂರೈಕೆ ಮಾಡಬಹುದು. ನಮ್ಮಲ್ಲಿ 16 ಟಿಎಂಸಿ ನೀರು ಮಾತ್ರ ಇದೆ. ತಮಿಳುನಾಡಿಗೆ ಏನು ನಿಗದಿಯಾಗಿದೆ ಆ ನೀರನ್ನು ಕೊಡೋಣ. ನಮಗೆ ಎಷ್ಟು ನೀರು ಬೇಕೋ ಅಷ್ಟು ಇಟ್ಟುಕೊಳ್ಳೋಣ. ಸದ್ಯ ಮಳೆ ಹೆಚ್ಚಾಗಿ ಆಗದ ಕಾರಣ ನೀರಿನ ಪ್ರಮಾಣ ಕಡಿಮೆ ಇದೆ ಎಂದರು.
ಫೆಡರಲ್ ವ್ಯವಸ್ಥೆಯ ಸಂವಿಧಾನದಲ್ಲಿ ಪ್ರತಿಯೊಂದು ರಾಜ್ಯಕ್ಕೂ ತನ್ನ ಹಿತಾಸಕ್ತಿಯನ್ನು ರಕ್ಷಿಸುವ ಹಕ್ಕು ಇದೆ. ಆದರೆ, ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಪ್ರತಿಕ್ರಿಯಿಸಿರುವುದು ದುಃಖಕರ ಸಂಗತಿಯಾಗಿದೆ. ಏಕೆಂದರೆ ಈ ವಿಷಯವು ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಇತ್ಯರ್ಥಗೊಂಡಿದೆ. ತಮಿಳುನಾಡಿನ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವುದರಿಂದ, ಕೇಂದ್ರ ಜಲ ಆಯೋಗ (ಸಿಡಬ್ಲೂಸಿ) ಸೇರಿದಂತೆ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಯಾವುದೇ ಅಡೆತಡೆಗಳಿಲ್ಲ. ಆದ್ದರಿಂದ, ಸಿಡಬ್ಲ್ಯೂಸಿ (ಸಿಡಬ್ಲೂಸಿ) ಮೇಕೆದಾಟು ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್)ಯನ್ನು ಪರಿಶೀಲಿಸಬಹುದು” ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಈಗಾಗಲೇ ಎಲ್ಲಾ ಕಾನೂನುಬದ್ದ ಅಡೆತಡೆಗಳನ್ನು ದಾಟಿದೆ. ನಾವು ಈಗಾಗಲೇ ನಮ್ಮ ವಿವರವಾದ ಯೋಜನಾ ವರದಿ (ಡಿಪಿಆರ್)ಯನ್ನು ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲೂಸಿ) ಸಲ್ಲಿಸಿದ್ದೇವೆ. ಸಿಡಬ್ಲ್ಯೂಸಿ (ಸಿಡಬ್ಲೂಸಿ)ಯ ವಿವಿಧ ನಿರ್ದೇಶನಾಲಯಗಳು ನಮ್ಮ DPR ಪರಿಶೀಲಿಸುತ್ತಿದ್ದು, ಈ ಯೋcಜನೆಯನ್ನು ಮುಂದಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ನಾವು ಸಿಡಬ್ಲೂಸಿ ಯೊಂದಿಗೆ ನಿರಂತರವಾಗಿ ಸಮನ್ವಯ ಮತ್ತು ಅನುಸರಣೆ ನಡೆಸುತ್ತಿದ್ದೇವೆ” ಎಂದರು.
ರಾಜ್ಯಕ್ಕೆ ನೀರಿನ ಅಭಾವ ಇದ್ಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, “ಸದ್ಯಕ್ಕೆ ಎರಡು ತಿಂಗಳಿಗೆ ನೀರಿನ ಸಮಸ್ಯೆ ಇಲ್ಲ. ಇಂದು ಕೆಆರ್ಸರ್ ಒಳ ಹರಿವು 11 ಟಿಎಂಸಿ ಇದೆ. ಇಂದು ಕಬಿನಿ ಜಲಾಶಯದಲ್ಲಿ 5 ಟಿಎಂಸಿ ಇದೆ. ಕುಡಿಯುವ ನೀರು ಬಿಟ್ಟು 3 ಟಿಎಂಸಿ ಹೆಚ್ಚುವರಿ ಇದೆ” ಎಂದು ಉತ್ತರಿಸಿದರು.
ಟಿಬಿ ಡ್ಯಾಂಗೆ ಕ್ರಷ್ ಗೇಟ್ ಅಳವಡಿಕೆ ವಿಚಾರಕ್ಕೆ, ಟಿಬಿ ಡ್ಯಾಂನ 19ನೇ ಗೇಟ್ ಮುರಿದು ಹೋಗಿತ್ತು. ಹೊಸ ಗೇಟ್ ಉದ್ಘಾಟನೆಗೆ ವ್ಯವಸ್ಥೆ ಮಾಡಿ ಕೊಳ್ಳಲಾಗಿದೆ. ಕೇಂದ್ರ ಜಲಸಂಪನ್ಮೂಲ ಸಚಿವರು ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ” ಎಂದು ತಿಳಿಸಿದರು.



