ಮೈಸೂರು: ಯುವಕನ ಕಿರುಕುಳ ಹಾಗೂ ಬ್ಲಾಕ್ ಮೇಲ್ ನಿಂದ ಬೇಸತ್ತ 2 ದಿನದಲ್ಲಿ ಮದುವೆ ಆಗಬೇಕಿದ್ದ ಯುವತಿ ಹಾಗೂ ಆಕೆಯ ಹೆತ್ತವರು ಆತ್ಮಹತ್ಯೆ ಮಾಡಿಕೊಂಡ ಭೀಕರ ಘಟನೆ ಮೃಸೂರಿನಲ್ಲಿ ನಡೆದಿದೆ.
ವರುಣಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕೆಂಪಯ್ಯನ ಹುಂಡಿಯ ನಿವಾಸಿಗಳಾದ ದಂಪತಿ ಶಿವಣ್ಣ-ನಾಗರತ್ನ ಹಾಗೂ ಅವರ ಮಗಳು ರಕ್ಷಿತಾ ಡೆತ್ ನೋಟ್ ಬರೆದಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಂಪಯ್ಯನ ಗ್ರಾಮದವನೇ ಆದ ಯುವಕ ಉಲ್ಲಾಸ್ ಗೌಡ ಎಂಬಾತ ರಕ್ಷಿತಾಳನ್ನು ಪ್ರೀತಿಸುತ್ತಿದ್ದು, ಮದುವೆ ಆಗುವುದಾಗಿ ಹೇಳಿದ್ದ. ಆದರೆ ಈತನ ಪ್ರಸ್ತಾಪವನ್ನು ಕುಟುಂಬದವರು ನಿರಾಕರಿಸಿದ್ದರು. ಈ ಸೇಡಿನಿಂದ ಆತ ಮದುವೆ ಮುರಿಯಲು ಯುತ್ನಿಸಿ ಕಿರುಕುಳ ನೀಡುತ್ತಿದ್ದ.
ಘಟನಾ ಸ್ಥಳಕ್ಕೆ ವರುಣಾ ಪೊಲೀಸರು ಆಗಮಿಸಿ ಪರಿಶೀಲನೆ ನೆಡೆಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಘಟನೆ ಸಂಬಂಧ ಮಾಹಿತಿ ಪಡೆದರು. ಡೆತ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.
ಮದುವೆ ಮನೆಯಲ್ಲಿ ಸೂತಕದ ಛಾಯೆ
ಎರಡು ದಿನಗಳಲ್ಲಿ ಯುವತಿಯ ಮದುವೆಗೆ ಸಕಲ ಸಿದ್ಧತೆ ನಡೆದಿತ್ತು. ರಕ್ಷಿತಾಳಿಗೆ ನಿಶ್ಚಿತಾರ್ಥ ಸಹ ಮಾಡಿದ್ದರು. ಬುಧವಾರ (ಜೂನ್ 24) ಮದುವೆಯನ್ನು ನಡೆಸಲು ನಿಶ್ಚಯಿಸಿ, ಸಕಲ ತಯಾರಿ ಮಾಡಿಕೊಂಡಿದ್ದರು. ಆದರೆ ಕುಟುಂಬದವರು ಈ ರೀತಿ ದುರಂತ ಅಂತ್ಯ ಕಂಡಿದ್ದರಿಂದ ಮದುವೆ ಸಂಭ್ರಮವಿರಬೇಕಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.
ಆರೋಪಿ ಉಲ್ಲಾಸ್ ಗೌಡ ರಕ್ಷಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನಿಗೆ ಮೆಸೇಜ್ ಮಾಡಿದ್ದ, ಅಲ್ಲದೆ ಈ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ನೊಂದ ರಕ್ಷಿತಾ ಮತ್ತು ಆಕೆಯ ತಂದೆ – ತಾಯಿ ವಿಷ ಸೇವಿಸಿ, ಸೋಮವಾರ ಬೆಳಗ್ಗೆ ತಮ್ಮ ಕೆಂಪಯ್ಯನ ಹುಂಡಿ ಮನೆಯ ಶೌಚಾಲಯದಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.



