ಕೋಚಿಂಗ್ ಸೆಂಟರ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 14 ವಿದ್ಯಾರ್ಥಿಗಳು ಸಜೀವದಹನಗೊಂಡ ಭೀಕರ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಬಳಿ ಸಂಭವಿಸಿದೆ.
ಸೋಮವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದ್ದು, ಬೆಂಕಿಯಿಂದ ಪ್ರಾಣ ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಮೊದಲನೇ ಮಹಡಿಯಿಂದ ಹಾರಿದ ದೃಶ್ಯಗಳು ಕಂಡು ಬಂದಿವೆ. ಘಟನೆಯಲ್ಲಿ 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕೋಚಿಂಗ್ ಸೆಂಟರ್ ಇದ್ದ ಮೂರಂತಸ್ತಿನ ಕಟ್ಟಡ ವಾಣಿಜ್ಯ ರಸ್ತೆಯ ಪ್ರಮುಖ ಭಾಗದಲ್ಲಿದ್ದು, ಕಟ್ಟಡದಲ್ಲಿ ಪ್ರಾಣಿ ಚಿಕಿತ್ಸಾ ಅಂಗಡಿ ಸೇರಿದಂತೆ ಹಲವು ಅಂಗಡಿಗಳು ಇದ್ದವು.
ಬೆಂಕಿ ಆವರಿಸಿಕೊಂಡಿದ್ದ ಕಟ್ಟಡದಿಂದ ಹಲವಾರು ಮಂದಿ ಹೊರಗೆ ಜಿಗಿದಿದ್ದು, ಒಬ್ಬ ವ್ಯಕ್ತಿ ಹಾರುವ ಪ್ರಯತ್ನದಲ್ಲಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ಆಯತಪ್ಪಿ ಕೆಳಗೆ ಬಿದ್ದ ವ್ಯಕ್ತಿ ನೆರವಾಗಿ ನೆಲದ ಮೇಲೆ ಬೀಳದೆ ಕೆಳಗಡೆ ಇದ್ದ ಅಂಗಡಿಗಳ ಬಳಿ ಬೇಲಿಯ ಮೇಲೆ ಬಿದ್ದಿದ್ದು, ಆತನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದೂ ಅಲ್ಲದೇ ಒಳಗೆ ಸಿಲುಕಿದ್ದ ವ್ಯಕ್ತಿಗಳ ರಕ್ಷಣಾ ಕಾರ್ಯ ನಡೆಸಿದರು.
ದುರಂತದ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಘಾತ ವ್ಯಕ್ತಪಡಿಸಿದ್ದು, ತುರ್ತು ನೆರವಿಗೆ ಸೂಚಿಸಿದ್ದಾರೆ.



