ಭಾರತದ ಜೀವ ಜಲ ಮುಂಗಾರು ಎರಡು ವಾರಗಳ ನಂತರ ಮತ್ತೆ ಪ್ರಬಲಗೊಳ್ಳುತ್ತಿದೆ. ಆದರೆ ಅತ್ಯಂತ ಅಲ್ಪಾವಧಿಯಲ್ಲಿ ಮಾಡಬೇಕಾದ ಹಾನಿಯನ್ನು ಮಾಡಿ ಆಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಭಾರತದಲ್ಲಿ ಜೂನ್ 4ರಂದು ತಡವಾಗಿ ಆಗಮಿಸಿದ ಮುಂಗಾರ ನಂತರ ಒಂದೇ ವಾರಕ್ಕೆ ಕೈಕೊಟ್ಟಿತು. ಎಲ್ ನೀನೋ ಪರಿಣಾಮ ದೇಶದಲ್ಲಿ ಮತ್ತೊಮ್ಮೆ ಬರಗಾಲ ಭೀತಿ ಆವರಿಸಿತ್ತು. ಆದರೆ ಇದೀಗ ಅರಬ್ಬಿ ಸಮುದ್ರದಲ್ಲಿ ಮತ್ತೊಮ್ಮೆ ಮುಂಗಾರು ಮಾರುತಗಳು ಪ್ರಬಲಗೊಳ್ಳುತ್ತಿದ್ದು, ಮತ್ತೊಮ್ಮೆ ಕರಾವಳಿಗೆ ಮುಂಗಾರು ಮಳೆ ಕಾಲಿಡುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ಇತ್ತೀಚಿನ ವರದಿ ಪ್ರಕಾರ ಜೂನ್ 22ರವರೆಗೆ ದೇಶದಲ್ಲಿ 53.1 ಮಿ.ಮೀ. ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಸರಾಸರಿ 97.6 ಮಿ.ಮೀ. ಮಳೆಯಾಗುತ್ತದೆ. ಅಂದರೆ ಸುಮಾರು ಶೇ.46ರಷ್ಟು ಮಳೆ ಕೊರತೆ ಆಗಿದೆ ಎಂದು ಅಂಕಿ-ಅಂಶ ನೀಡಿದೆ.
ಮಧ್ಯಪ್ರದೇಶದಲ್ಲಿ ಶೇ.58, ಗುಜರಾತ್ ನಲ್ಲಿ ಶೇ.84, ಛತ್ತೀಸ್ ಗಢದಲ್ಲಿ ಶೇ.71, ಜಾರ್ಖಂಡ್ ನಲ್ಲಿ ಶೇ.71ರಷ್ಟು ಮಳೆ ಕೊರತೆ ಆಗಿದೆ. ಇದು ಕಳೆದ 146 ವರ್ಷಗಳಲ್ಲೇ ಕನಿಷ್ಠ ಮಳೆ ಪ್ರಮಾಣ ಎಂದು ಹವಾಮಾನ ಇಲಾಖೆ ಹೇಳಿದೆ.



