ಬೆಂಗಳೂರು: ಒಬ್ಬರನ್ನು ಹಿಂದೆ ಹಾಕಿಯೇ ಮತ್ತೊಬ್ಬರು ಬರಬೇಕು. ಅದು ರಾಜಕೀಯ ಸಿದ್ಧಾಂತವಾಗಿದೆ ಪರಿಸ್ಥಿತಿಯು ಅದೇ ರೀತಿಯಲ್ಲಿರಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗುತ್ತಿದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ಇದು ಸ್ಪೀಡ್ ಆಗಿರುವ ಕಾಲ, ನಾವು ಆ ಸ್ಪೀಡ್ಗೆ ಓಡಬೇಕು. ರಾಜಕಾರಣ ಅಂದರೆ ಹಾಗೇ ಓಡದೇ ಇದ್ದರೆ ಟ್ರೇನ್ ಮಿಸ್ ಆಗುತ್ತದೆ ಎಂದು ಹೇಳಿದರು.
ರೈಲು ಮಿಸ್ ಆದರೆ ತುಮಕೂರಿಗೋ, ಅರಸೀಕೆರೆಗೋ ಗಾಡಿಯಲ್ಲಿ ಹೋಗಿಯಾದರೂ ರೈಲು ಹಿಡಿಯಬೇಕು. ರೈಲು ಹಿಡಿಯದೇ ಇದ್ದರೆ ಜನರೇ ಮರೆತುಬಿಡ್ತಾರೆ. ಇದು ನಾನು ಹೇಳುವುದಲ್ಲ. ಜನರೇ ಹೇಳುವ ಮಾತು. ರಾಜಕಾರಣ ಅಂದರೆ ಹಾಗೆಯೇ ಎಂದರು.
ನಾನು ದೊಡ್ಡ ಲೀಡರ್ ಎಂದರೆ ರಾಜಕೀಯ ಕೇಳಲ್ಲ. ಬದಲಾವಣೆ ಆಗುತ್ತಾ ಹೋಗುತ್ತದೆ. ನಾನು 20 ವರ್ಷದಲ್ಲಿ ನೋಡಿರುವ ಲೀಡರ್ ಈಗಿಲ್ಲ. ಅವರು ಓಡಿ ಹೋಗಿ ಹತ್ತಿದ್ರೆ, ಇನ್ನೂ ಇರುತ್ತಿದ್ದರು. ನಾನು ಲೀಡರ್ ಆಗಬೇಕು ಎನ್ನುವುದು ಎಲ್ಲರಿಗೂ ಇರುತ್ತದೆ. ಅವರು ಮೈಸೂರಲ್ಲೇ ಕೂತು ರಾಜಕಾರಣ ಮಾಡಬಹುದು. ಜನರ ಸಂಪರ್ಕ ಎಲ್ಲಿ ತನಕ ಇರುತ್ತದೆಯೋ ಅಲ್ಲಿ ತನಕ ಲೀಡರ್ ಎಂದು ಮಾರ್ಮಿಕವಾಗಿ ತಿಳಿಸಿದರು.
ಸಿದ್ದರಾಮಯ್ಯ ಸ್ಪೀಡ್ ಯಾಕೆ ಕಮ್ಮಿ ಆಯ್ತು ಎಂಬ ಪ್ರಶ್ನೆಗೆ, ಅದನ್ನು ಅವರನ್ನೇ ಕೇಳಿ. ನಾವು ಅವರಿಗೆ ಓಡಬೇಕು ಎಂದು ಹೇಳುತ್ತೇವೆ, ರಾಜಕೀಯ ಎಂದರೆ ಓಡಬೇಕು, ಓಡದಿದ್ದರೆ, ಕೆಲಸ ಆಗಲ್ಲ. ಯಾರು ಫೈಟ್ ಮಾಡ್ತಾರೆ ಅವರು ಉಳಿತಾರೆ. ಫೈಟ್ ಮಾಡ್ಲಿಲ್ಲ ಅಂದರೆ ಜನ ಮರೆಯುತ್ತಾರೆ. ನಾವು ಫ್ರಂಟ್ ಲೈನ್ನಲ್ಲಿ ನಿಲ್ಲಬೇಕು. ಇಲ್ಲ ಜನ ಹೊಸ ನಾಯಕನನ್ನು ಆಯ್ಕೆ ಮಾಡ್ತಾರೆ ಎಂದರು.
ಕೆಂಪೇಗೌಡ ಜಯಂತಿಯಲ್ಲಿ ಸಿದ್ದು ಫೋಟೊ ಇಲ್ಲ ಎಂಬ ವಿಚಾರವಾಗಿ ಮಾತನಾಡಿ, ಸರ್ಕಾರಿ ಕಾರ್ಯಕ್ರಮದಲ್ಲಿ ಫೋಟೋ ಹಾಕುವುದಕ್ಕೆ ಅಧಿಕೃತ ಬೇಕಲ್ಲ. ಡಿಸಿ ಎಂದು ಹಾಕಿದ್ರಾ? ಇತ್ತಲ್ಲ. ಬಿಡಿಎಯಿಂದ ಮಾಡಿದ್ದರೆ ಅವರೇ ಸ್ಪಷ್ಟನೆ ಕೊಡಬೇಕಲ್ಲ. ನಾವು ಹೇಳೋಕೆ ಆಗುವುದಿಲ್ಲ ಎಂದು ತಿಳಿಸಿದರು.
ಜನರ ಹೃದಯ ಸಿಂಸಾಹನ ಶಾಶ್ವತ ಎನ್ನುವುದು ಸಿದ್ದರಾಮಯ್ಯ ಹೇಳಿದ್ದು ಕರೆಕ್ಟ್ ಆಗಿದೆ. ಪವರ್ ಶಾಶ್ವತವಲ್ಲ. ಜನರ ಸಂಪರ್ಕ ಎಲ್ಲಿವರೆಗೂ ಇರುತ್ತದೋ, ಅಲ್ಲಿವರೆಗೆ ಅವರು ಲೀಡರ್. ಸಿಎಂ ಸ್ಥಾನ ಶಾಶ್ವತವಲ್ಲ ಅದು ನಿಜ. ಜನರ ಬೆಂಬಲವೇ ಶಾಶ್ವತ ಎಂದು ಹೇಳಿದರು.
ಇಡಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮನ್ನೇ ಟಾರ್ಗೆಟ್ ಮಾಡಿದ್ದಾರೋ ಗೊತ್ತಿಲ್ಲ. ಪೊಲಿಟಿಕಲ್ ಉದ್ದೇಶದಿಂದ ಮಾಡಿದ್ದಾರಾ ಎಂಬುದು ಗೊತ್ತಾಗಲು ಟೈಮ್ ಬೇಕು. ನ್ಯಾಚ್ಯುರಲ್ ಆಗಿ ಮಾಡಿದ್ದಾರೋ ನೋಡಬೇಕು. ರಾಜಕೀಯ ದಾಳಿ ಆಗಿದ್ದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದರು.
ಬಿಡದಿ ಟೌನ್ಶಿಪ್ ವಿಚಾರವಾಗಿ ಪ್ರತಿಕ್ರಿಯಿಸಿ, ರೈತರು ಹೋರಾಟ ಮಾಡ್ತಿದ್ದಾರೆ. ನಾನು ದಿನಾ ಟಿವಿಗಳಲ್ಲಿ ನೋಡ್ತಿದ್ದೇನೆ. ಬಿಜೆಪಿ ಜೆಡಿಎಸ್ ನವರು ಕೂಡ ಹೋರಾಟ ಮಾಡ್ತಿದ್ದಾರೆ. ನಮ್ಮ ಹೈಕಮಾಂಡ್ ನಾಯಕರು ಅದನ್ನು ನೋಡ್ತಾರೆ. ಸಿಎಂಗೆ ಅದರ ಬಗ್ಗೆ ಅರಿವಿದೆ. ಚರ್ಚೆ ಮಾಡ್ತಾರೆ. ನಮ್ಮ ಅಭಿಪ್ರಾಯವನ್ನೂ ಹೇಳ್ತೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.



