ಬೆಂಗಳೂರು:ಆಂಬ್ಯುಲೆನ್ಸ್ ಗೆ ದಾರಿ ಬಿಡದ ಯುವಕರ ಗುಂಪೊಂದು ರಸ್ತೆಯಲ್ಲಿ ವ್ಹೀಲಿಂಗ್ ಮಾಡಿರುವ ಘಟನೆ ತುಮಕೂರು ರಸ್ತೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಜೂನ್ 4 ರಂದು ನಡೆದ ಈ ಘಟನೆ ಸಂಬಂಧ ಆಂಬ್ಯುಲೆನ್ಸ್ನೊಳಗಿದ್ದ ವ್ಯಕ್ತಿಯೊಬ್ಬರು ಈ ದೃಶ್ಯಗಳನ್ನು ಸೆರೆಹಿಡಿದಿದ್ದು,ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ರಾಜ್ಯದಲ್ಲಿ ಆರೋಗ್ಯ ಕವಚ (108) ಆಂಬ್ಯುಲೆನ್ಸ್ ಸೇವೆ ವಿಳಂಬದಿಂದ ಸಂಭವಿಸುವ ಸಾವುಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ತುರ್ತು ಸಂದರ್ಭಗಳಲ್ಲಿ ಕರೆ ಮಾಡಿದ 15 ನಿಮಿಷದೊಳಗೆ ಆಂಬ್ಯುಲೆನ್ಸ್ ಸ್ಥಳ ತಲುಪದಿದ್ದರೆ ಅದರ ಚಾಲಕನಿಗೆ 5 ಸಾವಿರ ರೂ ದಂಡ ವಿಧಿಸುವ ನಿಯಮ ಜಾರಿಗೆ ತರಲು ಸರ್ಕಾರ ನಿಯಮ ರೂಪಿಸುತ್ತಿದೆ.
ಇಂತಹ ಸಂದರ್ಭದಲ್ಲಿ ಯುವಕರು ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಡದೇ ದುರ್ವರ್ತನೆ ತೋರಿದ್ದಾರೆ. ಯುವಕರಿಂದ ವ್ಹೀಲಿಂಗ್: ರೋಗಿಯೊಬ್ಬರನ್ನು ತುಮಕೂರು ರಸ್ತೆ ಮೂಲಕ ಆಂಬ್ಯುಲೆನ್ಸ್ನಲ್ಲಿ ಕರೆದೊಯ್ಯಲಾಗುತ್ತಿತ್ತು. ತುರ್ತು ವೈದ್ಯಕೀಯ ನೆರವಿನ ಅಗತ್ಯವಿದ್ದಿದ್ದರಿಂದ ಆಂಬ್ಯುಲೆನ್ಸ್ ಸೈರನ್ ಮೊಳಗಿಸಿಕೊಂಡು ತೆರಳುತ್ತಿದ್ದರೂ ಸಹ ಮುಂದೆ ದ್ವಿಚಕ್ರ ವಾಹನಗಳಲ್ಲಿದ್ದ ಐದಾರು ಯುವಕರು ರಸ್ತೆಯಲ್ಲಿ ವ್ಹೀಲಿಂಗ್ ಮುಂದುವರೆಸಿದ್ದಾರೆ.
ಸಾರ್ವಜನಿಕರ ಆಕ್ರೋಶ: ಗೊರಗುಂಟೆಪಾಳ್ಯದಿಂದ ಯಶವಂತಪುರದವರೆಗೂ ದಾರಿ ಬಿಡದೇ ಯುವಕರ ಗುಂಪು ಪುಂಡಾಟ ಪ್ರದರ್ಶಿಸಿದೆ ಎಂದು ಆರೋಪಿಸಲಾಗಿದೆ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತುರ್ತು ಸೇವೆಗಳಿಗೆ ಅಡ್ಡಿಪಡಿಸಿದ ಆರೋಪಿಗಳ ವಾಹನಗಳನ್ನ ಜಪ್ತಿಗೊಳಿಸಿ, ಚಾಲನಾ ಪರವಾನಗಿ ರದ್ದುಗೊಳಿಸಬೇಕು. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.
ಘಟನೆಯ ವಿಡಿಯೋ ಹಾಗೂ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಆರೋಪಿಗಳ ಪತ್ತೆಕಾರ್ಯ ಮುಂದುವರೆಸಲಾಗಿದೆ ಎಂದು ಯಶವಂತಪುರ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.



