ಉಡುಪಿ: ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಬಾರದು ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನಂತವೂ ಸಚಿವ ಸ್ಥಾನಕ್ಕೆ ಪಟ್ಟು ಹೆಚ್ಚಾಗಿದೆ.
ಚಿಕ್ಕಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದ ವೇಳೆ ಹೈಕಮಾಂಡ್ ನಾಯಕರಿಗೆ ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ 31 ಶಾಸಕರು ಮನವಿ ಪತ್ರ ನೀಡಿದ್ದರು.
ನಾಯಕತ್ವ ಬದಲಾವಣೆ ಚರ್ಚೆ ನಡುವೆ ಹೊಸ ಶಾಸಕರು ಸಚಿವ ಸ್ಥಾನಕ್ಕೆ ಮನವಿ ನೀಡಿದ ಬೆನ್ನಲ್ಲೇ ಬುಧವಾರ ಮೇಲ್ಮನೆ ಸದಸ್ಯರು ಕೂಡ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ. ಇದೀಗ ಸಚಿವ ಸಂಪುಟ ಪುನರಚನೆಗೆ ಪರೋಕ್ಷವಾಗಿ ಒತ್ತಡ ಹೇರಲಾಗುತ್ತಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಉಡುಪಿ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ, ಕಾರ್ಕಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ಶಾಸಕರು ಸಚಿವ ಸ್ಥಾನ ಬೇಡಿಕೆ ಸಲ್ಲಿಸುವುದು ತಪ್ಪಲ್ಲ. ಮೊದಲ ಬಾರಿ ಶಾಸಕರಾದವರಿಗೆ ಮಂತ್ರಿ ಪದವಿ ನೀಡಬಾರದೆಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಖರ್ಗೆಗೆ ಎಂಎಲ್ ಸಿಗಳ ಮನವಿ
ಇತ್ತೀಚೆಗೆ ದೆಹಲಿಗೆ ಭೇಟಿ ಕೊಟ್ಟಿದ್ದ ಪರಿಷತ್ ಸದಸ್ಯರ ನಿಯೋಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿ, ಕನಿಷ್ಠ 5 ಜನರನ್ನು ಸಂಪುಟ ಸೇರಿಸುವಂತೆ ಒತ್ತಾಯಿಸಿದೆ.
ಈ ಸಂಬಂಧ ಪರಿಷತ್ ಸದಸ್ಯರು ಬರೆದ ಪತ್ರ ಎಂಎಲ್ಸಿಗಳಿಗೆ ಸೂಕ್ತ ಪ್ರಾತಿನಿಧ್ಯ ಕೊಡಬೇಕು. ಸಂಪುಟದಲ್ಲಿ ಎಂಎಲ್ಸಿಗಳಿಗೆ ಪ್ರಾತಿನಿಧ್ಯ ಇಲ್ಲದಿರುವುದು, ಅಸಮಾನತೆ, ನಿರುತ್ಸಾಹ ಭಾವನೆ ಉಂಟುಮಾಡಲಿದೆ. ಇದರಿಂದ ವಿಧಾನಪರಿಷತ್ ಶಾಸಕರಿಗೆ ಭವಿಷ್ಯದಲ್ಲಿ ರಾಜಕೀಯ ನಿರೀಕ್ಷೆಗಳಿಲ್ಲ ಎಂಬ ಗ್ರಹಿಕೆಗೆ ಕಾರಣವಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಸಮರ್ಥ ನಾಯಕರು ಎಂಎಲ್ಸಿ ಚುನಾವಣೆಗಳಲ್ಲಿ ಸ್ಪರ್ಧಿಸುವ ಬದಲು ವಿಧಾನಸಭಾ ಟಿಕೆಟ್ಗಳನ್ನು ಪಡೆಯಲು ಮುಂದಾಗುತ್ತಾರೆ. ಇದು ಗುಂಪುಗಾರಿಕೆಗೆ ಕಾರಣವಾಗುತ್ತದೆ ಮತ್ತು ಪಕ್ಷ ಸಂಘಟನೆಯನ್ನು ದುರ್ಬಲಗೊಳಿಸುತ್ತದೆ ಎಂದು ಪತ್ರದಲ್ಲಿ ಪರಿಷತ್ ಸದಸ್ಯರು ಪ್ರತಿಪಾದಿಸಿದ್ದಾರೆ.
ಎಲ್ಲಾ ಎಂಎಲ್ಸಿಗಳು ಪಕ್ಷದ ಸಂಘಟನೆಯನ್ನು ಬಲಪಡಿಸುವಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಸಚಿವ ಸಂಪುಟ ಪುನಾರಚನೆ ವೇಳೆ ವಿಧಾನಪರಿಷತ್ನ ಕನಿಷ್ಠ ಐದು ಸದಸ್ಯರನ್ನು ಸಚಿವ ಸಂಪುಟದಲ್ಲಿ ಸೇರಿಸಬೇಕು. ಸಂಪುಟದಲ್ಲಿ ಎಂಎಲ್ಸಿಗಳ ಪ್ರಾತಿನಿಧ್ಯ ಇಲ್ಲದಿರುವುದು ಕೌನ್ಸಿಲ್ ಸದಸ್ಯರಲ್ಲಿ ಅಸಮಾನತೆ ಮತ್ತು ನಿರುತ್ಸಾಹದ ಭಾವನೆಯನ್ನು ಉಂಟುಮಾಡುತ್ತದೆ ಎಂದು ಮನವಿ ಮಾಡಲಾಗಿದೆ.
ಪ್ರಸ್ತುತ ಸರ್ಕಾರದಲ್ಲಿ ಎಂಎಲ್ಸಿಗಳಿಗೆ ಐದು ಕ್ಯಾಬಿನೆಟ್ ಸ್ಥಾನಗಳನ್ನು ಒದಗಿಸುವುದು ಸೂಕ್ತ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಒಬ್ಬರು, ಪದವೀಧರ ಅಥವಾ ಶಿಕ್ಷಕರ ಕ್ಷೇತ್ರಗಳಿಂದ ಒಬ್ಬರು, ವಿಧಾನಸಭೆ ಅಥವಾ ನಾಮನಿರ್ದೇಶಿತ ವರ್ಗದಿಂದ ಒಬ್ಬ ಎಂಎಲ್ಸಿಯನ್ನು ಆಯ್ಕೆ ಮಾಡುವಂತೆ ಮನವಿ ಮಾಡಲಾಗಿದೆ.
ಕಾಂಗ್ರೆಸ್ನಲ್ಲಿ 37 ಜನ ಪರಿಷತ್ ಸದಸ್ಯರು ಇದ್ದು, ಎನ್.ಎಸ್. ಭೋಸರಾಜು ಮಾತ್ರ ಸಚಿವರಾಗಿದ್ದಾರೆ. ಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ಸುಧಾಂ ದಾಸ್, ಡಿ.ಟಿ. ಶ್ರೀನಿವಾಸ್, ಪುಟ್ಟಣ್ಣ, ರಾಮೋಜಿ ಗೌಡ, ಹಂಪನಗೌಡ ಬಾದರ್ಲಿ, ಜಕ್ಕಪ್ಪನವರ್, ಬಿಲ್ಕೀಸ್ ಬಾನು, ಶಿವಕುಮಾರ್ ಅವರು ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದರು.



