ಹುಬ್ಬಳ್ಳಿ:ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿರುವ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಸಭಾಪತಿ ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಂಡೇ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸ ಮಾಡುವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ರಾಜೀನಾಮೆ ಪತ್ರ ಹರಿದಾಡುತ್ತಿರುವ ಬಗ್ಗೆ ಮಂಗಳವಾರ ಸುದ್ದಿಗಾರರಿಗೆ ಸ್ಪಷ್ಟನೆ ನೀಡಿದ ಹೊರಟ್ಟಿ ಅದು ಸಹಿ ಇಲ್ಲದ ಅನ್ ಸೈನ್ಡ್ ಲೇಟರ್. ರಾಜೀನಾಮೆ ಪತ್ರವನ್ನು ಬರೆದದ್ದು ನಿಜವಾದರೂ ನಾನು ಸಹಿ ಮಾಡಿರುವ ಪತ್ರ ಕಬೋರ್ಡ್ನಲ್ಲಿ ಇಟ್ಟಿದ್ದೆ. ಆದರೆ,ಸಹಿ ಇಲ್ಲದ ಪತ್ರವನ್ನು ಯಾರೋ ಒಬ್ಬರು ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಹೇಳಿದರು.
ಪತ್ರ ವೈರಲ್ ಆಗಿರುವುದನ್ನು ಕಂಡ ರಾಜ್ಯಪಾಲರು, ಮಂತ್ರಿಗಳು, ಸಾಹಿತಿಗಳು ಸೇರಿದಂತೆ ಸರಿಸುಮಾರು 100ಕ್ಕೂ ಹೆಚ್ಚು ಮಂದಿ ನನಗೆ ಫೋನ್ ಮಾಡಿ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸಲಹೆ ನೀಡಿದ್ದಾರೆ. ನಾನು ಮಾಡಿದ ತೀರ್ಮಾನಕ್ಕೆ ವಿರೋಧ ಬಂದಿದ್ದರಿಂದ ಎಲ್ಲರೂ ರಾಜೀನಾಮೆ ಕೊಡಬೇಡಿ ಎಂದು ಹೇಳುತ್ತಿದ್ದಾರೆ. ಅಲ್ಲದೇ, ಮಾ.27 ರಂದು ಕುಳಿತು ಮಾತನಾಡಿ ತೀರ್ಮಾನಿಸೋಣ ಎಂದೂ ಹೇಳಿದ್ದಾರೆ. ಹೀಗಾಗಿ ರಾಜೀನಾಮೆಯನ್ನು ಅಲ್ಲಿಗೆ ಕೈಬಿಟ್ಟಿದ್ದೇನೆ. ಬೆಂಗಳೂರಲ್ಲಿ ಸಭೆ ಮಾಡಬೇಕೆಂದುಕೊಂಡಿದ್ದೇವೆ ಎಂದು ಹೇಳಿದರು.
ರಾಜೀನಾಮೆ ಬೇಡ:
ಮೇಲ್ಮನೆಯ ಬಹಳಷ್ಟು ಸದಸ್ಯರು ಕೂಡಾ ರಾಜೀನಾಮೆ ನೀಡದಂತೆ ಹೇಳಿದ್ದಾರೆ; ನಮ್ಮ ಶಾಸನ ಸಭೆ ಸದಸ್ಯರು ಕೂಡ ರಾಜೀನಾಮೆ ನೀಡದಂತೆ ತಿಳಿಸಿದ್ದಾರೆ. ಪುಟ್ಟಣ್ಣ, ಸಿಟಿ ರವಿ ಸೇರಿದಂತೆ ಹಲವರು ಕರೆ ಮಾಡಿ ರಾಜೀನಾಮೆ ವಿಷಯದಲ್ಲಿ ಮುಂದುವರಿಬೇಡಿ ಎಂದು ವಿನಂತಿ ಮಾಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ನನಗೆ ಇಷ್ಟೊಂದು ಗೌರವ ಕೊಡುತ್ತಿರುವುದರಿಂದ ನಾನು ರಾಜೀನಾಮೆಯಿಂದ ಹಿಂದೆ ಸರಿದ್ದೇನೆ ಎಂದರು.
ಈ ಹಿಂದೆ ಇಂತಹ ಘಟನೆ ಆಗಿರಲಿಲ್ಲ. ಈ ಬಾರಿ ನಡೆದ ಅಧಿವೇಶನದಲ್ಲಿ 19,20,21ಕ್ಕೆ ಸದನ ಮುಂದುವರೆಸಲಾಗದಂತೆ ಮಾಡಲಾಯಿತು ಬಜೆಟ್ ಮೇಲೆ ಮುಖ್ಯಮಂತ್ರಿ ಉತ್ತರ ಕೊಟ್ಟ ನಂತರ ಹನಿ ಟ್ರ್ಯಾಪ್ ಉತ್ತರ ಕೊಡಿಸುವ ಜವಾಬ್ದಾರಿ ನನ್ನದು ಎಂದು ನಾನು ಹೇಳಿದ್ದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಕೂಡ ಭರವಸೆ ನೀಡಿದರು. ಆದರೂ, ಅದೇ ಗದ್ದಲದಲ್ಲಿ ಬಿಲ್ ಕೂಡ ಪಾಸ್ ಆದವು. ಚರ್ಚೆ ಆಗದೇ ಈ ರೀತಿ ಗದ್ದಲದಲ್ಲಿ ಬಿಲ್ ಪಾಸ್ ಆಗಬಾರದಿತ್ತು ಅನ್ನೋದು ನನ್ನ ಅಭಿಪ್ರಾಯ. ಇದು ಜನರಿಗೆ ಮೋಸ ಮಾಡಿದಂತೆ ಎಂದು ಹೊರಟ್ಟಿ ಬೇಸರ ಹೊರಹಾಕಿದರು.
ನಿಯಮಗಳ ಬಗ್ಗೆ ಪತ್ರ:
ರಾಜೀನಾಮೆ ನೀಡಬಾರದು ಅಂತ ಈಗಾಗಲೇ ತೀರ್ಮಾನ ಮಾಡಿದ್ದೇನೆ. 27ರ ನಂತರ ಎಲ್ಲ 75 ಸದಸ್ಯರಿಗೆ ಸದನದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಪತ್ರ ಕಳಿಸುವೆ. ಯಾರು ಸಹ ನನ್ನ ಮಾತು ಮೀರಲ್ಲ ಎನ್ನುವ ನಂಬಿಕೆಯಿದೆ. ಈಗಿನ ದಿನಮಾನಗಳಲ್ಲಿ ಪ್ರತಿಷ್ಠೆಯೇ ಹೆಚ್ಚಾಗಿದೆ. ಜನರ ಅಭಿವೃದ್ಧಿ ಬಗ್ಗೆ ಯಾವ ಚರ್ಚೆ ಕೂಡ ಆಗಿಲ್ಲ. ಹನಿ ಟ್ರ್ಯಾಪ್ ಬಗ್ಗೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತೇವೆ ಎಂದಿರುವುದರಿಂದ ಅಲ್ಲಿಗೆ ಅದು ಮುಗಿದೋಯ್ತು.
ಮುಂದಿನ ಅಧಿವೇಶನಕ್ಕೆ ಸದನ ಉತ್ತಮಗೊಳಿಸುವ ಕೆಲಸ ಮಾಡ್ತೇವೆ. ಈ ಘಟನೆ ಆಗಿದ್ದು ಒಳ್ಳೆದಾಯ್ತು, ಸುಧಾರಣೆಗೆ ಒಂದು ದಾರಿ ಆದಂತಾಗಿದೆ. ನಾನು ಸ್ವಲ್ಪ ಭಾವುಕನಾಗುವುದರಿಂದ ಸಹಜವಾಗಿ ಕಣ್ಣಲ್ಲಿ ನೀರು ಬರಲಿದೆ. ವ್ಯವಸ್ಥೆ ಸರಿಪಡಿಸಲು ಏನಾದರೂ ಮಾಡಬೇಕು. ಜನರ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡ್ತೇನೆ ಎಂದರು.



