ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಭಾರತೀಯರಿಗೆ ಪಾಲಿಗೆ ಸವಾಲಿನ ಸಮಯವಗಿದ್ದು, ಸವಾಲುಗಳನ್ನು ಎದುರಿಸಲು ನಾಗರಿಕರು ಒಗ್ಗಟ್ಟಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಭಾನುವಾರ ಮಾತನಾಡಿದ ಅವರು, ಪಶ್ಚಿಮ ಏಷ್ಯಾದಲ್ಲಿ ವಾಸಿಸುತ್ತಿರುವ ಮತ್ತು ಕೆಲಸ ಮಾಡುತ್ತಿರುವ ಒಂದು ಕೋಟಿಗೂ ಹೆಚ್ಚು ಭಾರತೀಯರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಿದ್ದಕ್ಕಾಗಿ ಗಲ್ಫ್ ರಾಷ್ಟ್ರಗಳಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ನಮ್ಮ ನೆರೆಹೊರೆಯಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಘೋರ ಯುದ್ಧ ನಡೆಯುತ್ತಿದೆ. ಇದು ನಿಸ್ಸಂದೇಹವಾಗಿ ಸವಾಲಿನ ಸಮಯ. ಈ ಸವಾಲನ್ನು ಜಯಿಸಲು ನಾವು ಒಗ್ಗೂಡಬೇಕೆಂದು ನಾನು ಮತ್ತೊಮ್ಮೆ ಎಲ್ಲಾ 140 ಕೋಟಿ ನಾಗರಿಕರಿಗೆ ಇಂದಿನ ‘ಮನ್ ಕಿ ಬಾತ್’ ಮೂಲಕ ಒತ್ತಾಯಿಸುತ್ತೇನೆ ಎಂದು ಹೇಳಿದರು.
ಪಶ್ಚಿಮ ಏಷ್ಯಾ ಸಂಘರ್ಷ ಫೆಬ್ರವರಿ 28ರಂದು ಶುರುವಾಯಿತು. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದರೆ, ಇರಾನ್ ತನ್ನ ನೆರೆಹೊರೆಯಲ್ಲಿರುವ ಅಮೆರಿಕ ಮಿತ್ರರಾಷ್ಟ್ರಗಳು ಮತ್ತು ಇಸ್ರೇಲ್ ರಾಜಧಾನಿ ಟೆಲ್ ಅವಿವ್ ಗುರಿಯಾಗಿಸಿಕೊಂಡು ಪ್ರತೀಕಾರದ ದಾಳಿ ನಡೆಸುತ್ತಿದೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ನಿಯಂತ್ರಿಸುತ್ತಿದ್ದು, ಇದು ವಿಶ್ವದ ಶೇ.20ರಷ್ಟು ಇಂಧನ ಸಾಗಿಸುವ ಪ್ರಮುಖ ಹಡಗು ಮಾರ್ಗವಾಗಿದೆ. ಸಂಘರ್ಷ ಪ್ರಾರಂಭವಾದಾಗಿನಿಂದ ಇರಾನ್ ಕೆಲವೇ ಹಡಗುಗಳಿಗೆ ಮಾತ್ರ ಈ ಮಾರ್ಗದಲ್ಲಿ ಸಾಗಲು ಅನುಮತಿ ನೀಡಿದೆ.
ಪ್ರಧಾನಿ ಮೋದಿ, ಸೌದಿ ಅರೇಬಿಯಾ, ಯುಎಇ, ಕತಾರ್, ಬಹ್ರೇನ್, ಕುವೈತ್, ಜೋರ್ಡಾನ್, ಇರಾನ್, ಫ್ರಾನ್ಸ್, ಇಸ್ರೇಲ್ ಮತ್ತು ಮಲೇಷ್ಯಾ ಸೇರಿದಂತೆ ಹಲವಾರು ದೇಶಗಳ ನಾಯಕರೊಂದಿಗೆ ಮಾತನಾಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೂ ಸಹ ಮಾತುಕತೆ ನಡೆಸಿದ್ದಾರೆ. ಮಾರ್ಚ್ 24 ರಂದು ಇಬ್ಬರ ನಡುವೆ ದೂರವಾಣಿ ಸಂಭಾಷಣೆಯ ನಂತರ, ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಯ ಕುರಿತು ಉಪಯುಕ್ತ ಅಭಿಪ್ರಾಯ ಹಂಚಿಕೊಳ್ಳಲಾಯಿತು ಎಂದು ಹೇಳಿದರು.
ಮತ್ತೊಂದೆಡೆ, ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಇಂಧನ ಕೊರತೆಯಿಂದಾಗಿ ಭಾರತದಲ್ಲಿ ಲಾಕ್ಡೌನ್ ಹೇರುವ ವದಂತಿಗಳನ್ನು ಕೇಂದ್ರ ಸರ್ಕಾರ ಶುಕ್ರವಾರ ತಳ್ಳಿಹಾಕಿತ್ತು. ದೇಶದಲ್ಲಿ ಕನಿಷ್ಠ ಎರಡು ತಿಂಗಳಿಗಳಿಗೆ ಆಗುವಷ್ಟು ಕಚ್ಚಾ ತೈಲ, ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿದ್ದು ವದಂತಿ ಸುದ್ದಿಗಳನ್ನು ನಂಬದಂತೆ ಸರ್ಕಾರ ಮನವಿ ಮಾಡಿತ್ತು.
“ದೇಶದಲ್ಲಿ ಲಾಕ್ಡೌನ್ನಂತಹ ಯಾವುದೇ ಪರಿಸ್ಥಿತಿ ಇಲ್ಲ. ಈ ಬಗ್ಗೆ ಯಾವುದೇ ಚರ್ಚೆಯೂ ಇಲ್ಲ. ಲಾಕ್ಡೌನ್ ವದಂತಿಗಳು ಸಂಪೂರ್ಣವಾಗಿ ಸುಳ್ಳು” ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಸ್ಪಷ್ಟಪಡಿಸಿದ್ದರು.



