ಕೂಡ್ಲಿಗಿ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಹಲವಾರು ಕುಟುಂಬಗಳು ಸ್ವಾವಲಂಬಿಗಳಾಗುತ್ತಿದ್ದು, ಈ ಯೋಜನೆಗಳನ್ನು ಜಾರಿಗೆ ತಂದ ಸಿಎಂ ಸಿದ್ದರಾಮಯ್ಯ ಅವರಿಗೆ ವಿಶೇಷ ರೀತಿಯಲ್ಲಿ ಧನ್ಯವಾದ ಅರ್ಪಿಸುವ ಕೆಲಸಗಳು ನಡೆಯುತ್ತಿವೆ. ಇದೀಗ ಅಂತಹದ್ದೇ ಒಂದು ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದಿದೆ.
ಕೂಡ್ಲಿಗಿ ತಾಲ್ಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ಮಲ್ಲೇಶಪ್ಪ ತಿಪ್ಪೇಸ್ವಾಮಿ ಹಾಗೂ ಪಾರ್ವತಿ ದಂಪತಿ ಮನೆಯ ಬಾಗಿಲಿನ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿತ್ರವನ್ನು ಕೆತ್ತನೆ ಮಾಡಿಸಿ ಚಿತ್ರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೆಸರು ಬರೆಸಿ ಗಮನ ಸೆಳೆದಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ಪಾರ್ವತಮ್ಮ ಅವರಿಗೆ 30 ಸಾವಿರ ಸಂದಾಯವಾಗಿದ್ದು, ಈ ಹಣವನ್ನು ಯಾವುದಕ್ಕೂ ಬಳಸಿರಲಿಲ್ಲ. ಈಗ ಅದನ್ನು ಬಳಸಿ ಮನೆಯ ಬಾಗಿಲಿಗೆ ಸಿದ್ದರಾಮಯ್ಯ ಚಿತ್ರ ಕೆತ್ತಿಸಲಾಗಿದೆ. ಇದಕ್ಕೆ 28 ಸಾವಿರ ಖರ್ಚಾಗಿದೆ.
ಇದೆಲ್ಲವೂ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಮಾಡಿದ್ದೇವೆ. ಹಳೇ ಬಾಗಿಲನ್ನು ತೆಗೆದು ಹಾಕಿ, ಸಿದ್ದರಾಮಯ್ಯ ಅವರ ಭಾವಚಿತ್ರವಿರುವ ಹೊಸ ಬಾಗಿಲು ಮನೆಗೆ ಅಳವಡಿಸಿ-ದ್ದೇವೆ. ಊರಲ್ಲಿ ಹಬ್ಬವಿರುವ ಕಾರಣಕ್ಕೆ ಪೂಜೆ ಸಲ್ಲಿಸಿದೆವು ಎಂದು ಮಲ್ಲೇಶಪ್ಪ ತಿಪ್ಪೇಸ್ವಾಮಿ ತಿಳಿಸಿದರು.
ಈ ಹಿಂದೆ ಗೃಹಲಕ್ಷ್ಮೀ ಹಣದಿಂದ ಕುಟುಂಬಗಳು ಹಲವಾರು ರೀತಿ ಸದ್ಭಳಕೆ ಮಾಡಿಕೊಂಡಿವೆ. ಕೆಲವರು ಮಗನಿಗೆ ಓದಲು ಬೈಕ್ ಕೊಡಿಸಿದರೆ, ಇನ್ನು ಕೆಲವರು ಅಂಗಡಿ ತೆರೆದಿದ್ದಾರೆ. ಇನ್ನು ಕೆಲವರು ಮಗಳಿಗೆ ಕಂಪ್ಯೂಟರ್ ಕೊಡಿಸಿದ್ದಾರೆ. ಒಬ್ಬ ಮಹಿಳೆಯ ಊರಿಗೆ ಹೋಳಿಗೆ ಊಟ ಹಾಕಿಸಿದ್ದರು.



