ಬೆಂಗಳೂರು: 17ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕನ್ನು ಸಾವಯವ ತಾಲೂಕು ಆಗಿ ಘೋಷಿಸಿರುವುದಕ್ಕೆ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
2025-26ರ ಬಜೆಟ್ ಕುರಿತು ಸದನದಲ್ಲಿ ಮಾತನಾಡಿದ ಅವರು, ಹಣವನ್ನು ಯಾವ ಇಲಾಖೆಗೆ ನಿಗದಿಪಡಿಸುವುದು ಮುಖ್ಯವಲ್ಲ, ರಾಜ್ಯದ ಪ್ರತಿಯೊಬ್ಬ ಪ್ರಜೆಗೆ ಏನನ್ನು ಕೊಡುತ್ತೇವೆ ಎಂಬುದನ್ನು ಚರ್ಚಿಸಬೇಕಾಗುತ್ತದೆ. ಅದರ ಕುರಿತು ನಾವು ಆಲೋಚಿಸಬೇಕಾಗುತ್ತದೆ ಎಂದರು.
ಆರೋಗ್ಯ ಇಲಾಖೆಯಲ್ಲಿ ಆಸ್ಪತ್ರೆಗಳಿಗೆ ಅತಿಹೆಚ್ಚಿನ ಮೊತ್ತವನ್ನು ನಿಯೋಜನೆ ಮಾಡಲಾಗಿದೆ. ಆದರೆ ಅಲ್ಲಿ ರೆವೆನ್ಯೂ ಹೆಲ್ತ್ ಎಕ್ಸ್ಪೆಂಡಿಚರ್; ಔಷಧಿ, ಚಿಕಿತ್ಸೆ ಮತ್ತು ನಿರ್ವಹಣೆಗೆ ಹಣವನ್ನು 6.3% ಕಡಿಮೆ ಮಾಡಿದ್ದೇವೆ. ಇದನ್ನು ಕಳೆದ ವರ್ಷದಷ್ಟಾದರೂ ಇಡಬೇಕು ಎಂದು ನಾನು ನಿಮ್ಮ ಮೂಲಕ ಆಗ್ರಹ ಮಾಡುತ್ತೇನೆ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು.
ಆಸ್ಪತ್ರೆ ಕಟ್ಟುವುದು ಹೆಚ್ಚುಗಾರಿಕೆಯಲ್ಲ, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ನೇಮಕ ಮಾಡಬೇಕು. ವೈದ್ಯರು, ನರ್ಸ್, ಗ್ರೂಪ್ ಡಿ ಸೇರಿದಂತೆ ಸುಮಾರು 38 ಸಾವಿರ ವಿವಿಧ ಹುದ್ದೆಗಳು ಆರೋಗ್ಯ ಇಲಾಖೆಯಲ್ಲಿ ಖಾಲಿ ಇವೆ. ಆಸ್ಪತ್ರೆ ಕಟ್ಟುವುದು ಎಷ್ಟು ಮುಖ್ಯವೋ ಅದಕ್ಕೆ ಸಿಬ್ಬಂದಿ ನೇಮಕವೂ ಅಷ್ಟೇ ಮುಖ್ಯ. ಅದಕ್ಕಾಗಿ ನನ್ನ ಪ್ರಕಾರ ಒಂದು ತುರ್ತು ಯೋಜನೆಯನ್ನು ನಾವು ಸಿದ್ಧಪಡಿಸಿ ಮುಂದಿನ 1 ವರ್ಷದಲ್ಲಿ ಖಾಲಿ ಇರುವ ಶೇ 80ರಷ್ಟು ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಸಾಲ ಸ್ಥಿರೀಕರಣ ನಿಧಿ ಸ್ಥಾಪಿಸಿ
ಬೆಂಗಳೂರು: ಪ್ರತಿ ವರ್ಷ ಬಡ್ಡಿ ಪಾವತಿ ಏರಿಕೆಯಾಗುತ್ತಿದೆ. ಆದಾಯದ 16.9% ಮೊತ್ತವನ್ನು ನಾವು ಬಡ್ಡಿ ರೂಪದಲ್ಲಿ ಪಾವತಿಸುತ್ತಿದ್ದೇವೆ. ಇದು ಹೀಗೇ ಮುಂದುವರೆದರೆ 2029-2030ರ ಹೊತ್ತಿಗೆ 79,000 ಕೋಟಿ ರೂ. ಪಾವತಿಸಬೇಕಾಗುತ್ತದೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
2026-27ರ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, Karnataka Debt Stabilisation Fund (ಕರ್ನಾಟಕ ಸಾಲ ಸ್ಥಿರೀಕರಣ ನಿಧಿ) ಅನ್ನು ಸೃಷ್ಟಿಸಿ. 0.25% ಜಿಡಿಎಸ್ಪಿಯಷ್ಟು ಮೊತ್ತವನ್ನು ನೇರವಾಗಿ ಈ ಫಂಡ್ ನಲ್ಲಿ ಹೂಡಿಕೆ ಮಾಡಿ. ಅದನ್ನು ಪುನರ್ ರೂಪಿಸಲು ಮತ್ತು ಹೆಚ್ಚು ಬಡ್ಡಿ ದರ ಇರುವ ಬಾಂಡ್ ಗಳ ಸಾಲ ತೀರಿಸಲು ಒಂದು ರೂಪ ಕೊಡಲು ಒಂದು ವ್ಯವಸ್ಥೆಯನ್ನು ರೂಪಿಸಿ ಎಂದು ಮನವಿ ಮಾಡಿದರು.
ಜೊತೆಗೆ ಕೇಂದ್ರ ಸರ್ಕಾರದ 8.5%ಕ್ಕಿಂತ ಹೆಚ್ಚಿರುವ ಸಾಲವನ್ನು ಆದಷ್ಟು ಬೇಗ ತೀರಿಸಿದರೆ ನಾವು ಸೀಲಿಂಗ್ ಅನ್ನು ಹಿಟ್ ಮಾಡಲು ಅನುಕೂಲವಾಗುತ್ತದೆ. ಈಗಾಗಲೇ ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ರಿವ್ಯೂ ಕಮಿಟಿ ಪ್ರಕಾರ, ಶೇ. 15 ಮಿತಿ ಇದೆ. ನಾವು ಈಗಾಗಲೇ ಅದರ ಮಿತಿಯನ್ನೂ ಮೀರಿದ್ದೇವೆ ಎಂದರು.
10,000ಕ್ಕಿಂತ ಹೆಚ್ಚಿನ ಎಫ್ಪಿಒಗಳಿಗೆ ಹೆಚ್ಚಿನ ಅನುದಾನ ಕೊಡಬೇಕು
ಬೆಂಗಳೂರು: ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಗೆ ಸಂಬಂಧಿಸಿದಂತೆ ರೈತ ಉತ್ಪಾದನಾ ಸಂಘಗಳಿಗೆ ಕಳೆದ ಬಜೆಟ್ ಗೆ ಹೋಲಿಸಿದರೆ 20 ಕೋಟಿ ರೂ. ನಿಗದಿಗೊಳಿಸಲಾಗಿತ್ತು. ಈ ಬಜೆಟ್ ನಲ್ಲಿ 1 ರೂ. ಕೂಡ ಇಟ್ಟಿಲ್ಲ. ರಾಜ್ಯದಲ್ಲಿರುವ 10,000ಕ್ಕಿಂತ ಹೆಚ್ಚಿನ ಎಫ್ಪಿಒಗಳಿಗೆ ಹೆಚ್ಚಿನ ಅನುದಾನವನ್ನು ಕೊಡಬೇಕು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಒತ್ತಾಯಿಸಿದರು.
2026-27ರ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆಯ 1 ಅಂಕಿಅಂಶದ ಪ್ರಕಾರ, ರೈತರು ತಾವು ಬೆಳೆದ ಪದಾರ್ಥಗಳನ್ನು 30-60 ದಿನಗಳ ಕಾಲ ಇಟ್ಟುಕೊಳ್ಳುವ ವ್ಯವಸ್ಥೆ ಮಾಡಿಕೊಂಡರೆ ಶೇ.20 – 40ಕ್ಕಿಂತ ಹೆಚ್ಚು ಆದಾಯ ಬರುತ್ತದೆ. ಇದಕ್ಕೆ ನಾವು ಕೋಲ್ಡ್ ಚೈನ್ ಇನ್ವೆಸ್ಟ್ ಪ್ರೋಗ್ರಾಂ ಅನ್ನು ಹೊಸದಾಗಿ ಲಾಂಚ್ ಮಾಡಿ 200 ಕೋಟಿ ನಿಗದಿಮಾಡಬೇಕು ಎಂದು ಮನವಿ ಮಾಡಿದರು.
ದೇಶದಲ್ಲಿ ಇರುವ ಪ್ರಮುಖ ಸಮಸ್ಯೆ ಮಣ್ಣಿನ ಸವಕಳಿ. ಮಣ್ಣಿನ ಸವಕಳಿ ತಡೆಗೆ ಇದ್ದಂತಹ ಹಣದ ಅನುದಾನದ ಪ್ರಮಾಣವನ್ನು ಕೂಡ ಕಡಿತ ಮಾಡಲಾಗಿದೆ. ಮಣ್ಣಿನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಇದನ್ನು ತಡೆಗಟ್ಟಲು ಅನುದಾನದ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.



