ಕರಾವಳಿ ಭಾಗದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭೂಕುಸಿತ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮಣ್ಣಗುಂಡಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು, ಬೆಂಗಳೂರು-ಮಂಗಳೂರು ಸಂಪರ್ಕ ಕಡಿತಗೊಂಡಿದೆ.
ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಕಡಬ ತಾಲೂಕಿನ ಮಣ್ಣಗುಂಡಿ ಬಳಿ ರಾಷ್ಟ್ರೀಯ ಹೆದ್ದಾರಿ-75ರ ಮೇಲೆ ಎರಡು ಬದಿಯಿಂದಲೂ ಮಣ್ಣು ಕುಸಿದಿದ್ದರಿಂದ ವಾಹನ ಸಂಚಾರ ಬಂದ್ ಆಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಸಾಗುವ ಲಾರಿ, ಬಸ್, ಟ್ರಕ್ಗಳ ಸಂಚಾರ ಸ್ಥಗಿತಗೊಂಡಿದೆ. ಧರ್ಮಸ್ಥಳ ಕ್ರಾಸ್ನಿಂದ ಸ್ವಲ್ಪ ಮುಂದೆ ಕುಸಿತ ಉಂಟಾಗಿದೆ. ಆದರೆ ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ವಾಹನ ಸಂಚರಿಸಬಹುದಾಗಿದೆ. ನೆಲ್ಯಾಡಿ ಬಳಿ ಎಡಕ್ಕೆ ಹೋಗಿ ಕೊಕ್ಕಡ ಮಾರ್ಗವಾಗಿ ರಾ.ಹೆ.75 ಸಂಚರಿಸಲು ಎಸ್ ಪಿ ಡಾ.ಅರುಣ್ ಮನವಿ ಮಾಡಿದ್ದಾರೆ.
ಮಂಗಳೂರಿನ ಕದ್ರಿ ಹಿಲ್ಸ್ ಸರ್ಕ್ಯೂಟ್ ಹೌಸ್ ಬಳಿಯ ರಸ್ತೆಗೆ ಬೃಹತ್ ಗುಡ್ಡ ಕುಸಿತವಾಗಿದ್ದು, ಭಾರೀ ಪ್ರಮಾಣದ ಕಲ್ಲು, ಮಣ್ಣು ರಸ್ತೆಗೆ ಬಿದ್ದಿದೆ. ವಾಹನ ಸಂಚಾರ ಇರುವ ಈ ರಸ್ತೆಗೆ ರಾತ್ರಿ ವೇಳೆ ಗುಡ್ಡ ಬಿದ್ದಿರೋದ್ರಿಂದ ಯಾವುದೇ ಅನಾಹುತಗಳಾಗಿಲ್ಲ. ಸದ್ಯ ರಸ್ತೆಗೆ ಬಿದ್ದಿರೋ ಕಲ್ಲು, ಮಣ್ಣುನ್ನು ಪಾಲಿಕೆ ಸಿಬ್ಬಂದಿಗಳು ತೆರವುಗೊಳಿಸುತ್ತಿದ್ದಾರೆ.
ಮೇರಿಹಿಲ್ನ ಕೆನರಾ ವಿಕಾಸ ಕಾಲೇಜಿನ ಕಾಂಪೌಂಡ್ ಗೋಡೆ ಬುಧವಾರ ತಡರಾತ್ರಿ ಕುಸಿದು ಬಿದ್ದಿದ್ದು, ಕಾಂಪೌಂಡ್ ಪಕ್ಕ ನಿಲ್ಲಿಸಿದ್ದ 16 ಬೈಕ್ ಹಾಗೂ ಒಂದು ಇನೋವಾ ಕಾರ್ ಸಂಪೂರ್ಣವಾಗಿ ಹಾನಿಯಾಗಿದೆ. ಕಾಂಪೌಂಡ್ ಕುಸಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


