ಕಾಂತಾರ-2 ಚಿತ್ರಕ್ಕೆ ಮೇಲಿಂದ ಮೇಲೆ ಅಡ್ಡಿಗಳು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ದೈವದ ಮೊರೆ ಹೋದ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿಗೆ ಪಂಜುರ್ಲಿ ದೈವ ಅಪಾಯದ ಎಚ್ಚರಿಕೆ ನೀಡಿದೆ
ಮಂಗಳೂರಿನ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ ಜಾರಂದಾಯ ದೈವದ ಉತ್ಸವದಲ್ಲಿ ಭಾಗಿಯಾಗಿದ್ದ ನಟ ರಿಷಭ್ ಶೆಟ್ಟಿ ತಮಗೆ ಎದುರಾಗುತ್ತಿರುವ ಸಂಕಷ್ಟಗಳ ಕುರಿತು ಹೇಳಿಕೊಂಡಿದ್ದಾರೆ.
ನಿನಗೆ ಜಗತ್ತಿನಾದ್ಯಂತ ಶತ್ರುಗಳು ಹುಟ್ಟಿಕೊಂಡಿದ್ದಾರೆ. ನಿನ್ನ ಸಂಸಾರ ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಸಂಚು ನಡೆದಿದೆ. ಗಂಡಾಂತರ ಬಂದಿದೆ ಎಂದು ನನ್ನ ಬಳಿ ಬಂದೆಯಾ ಎಂದು ಪಂಜುರ್ಲಿ ದೈವ ರಿಷಭ್ ಶೆಟ್ಟಿಗೆ ಹೇಳಿದೆ.
ನಿನಗೆ ಯಾರು ಕೇಡು ಮಾಡಿದ್ದಾರೆಂದು ಈಗ ಹೇಳಲ್ಲ. ನೋಡಿಕೊಳ್ತೇನೆ. ನನ್ನನ್ನು ನಂಬಿ ಬಂದಿದ್ದಿಯಾ. ನನ್ನ ನಂಬಿದವರನ್ನು ನಾನು ಕೈ ಇಡಲ್ಲ. ನನ್ನ ಸೇವೆ ಮಾಡುತ್ತೇನೆ ಎಂದು ಹರಕೆ ಹೊತ್ತಿಕೊ. 5 ತಿಂಗಳಲ್ಲಿ ನಿನಗೆ ಒಳ್ಳೆಯದು ಮಾಡುತ್ತೇನೆ ಎಂದು ವಾರಾಹಿ ಪಂಜುರ್ಲಿ ಅಭಯ ನೀಡಿದೆ.
ರಿಷಭ್ ಶೆಟ್ಟಿ ಅಭಿನಯದ ಕಂತಾರ ಚಿತ್ರ ಯಶಸ್ಸಿನ ಹಿನ್ನೆಲೆಯಲ್ಲಿ ಕಾಂತಾರ ಚಾಪ್ಟರ್-1 ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಹಲವು ಅಡ್ಡಿಗಳು ಉಂಟಾಗಿವೆ. 2024ರಲ್ಲಿ ಉಡುಪಿಯಲ್ಲಿ ಚಿತ್ರ ಕಲಾವಿದರು ಪ್ರಯಾಣಿಸುತ್ತಿದ್ದ ಬಸ್ ಉರುಳಿಬಿದ್ದಿತ್ತು. ಚಿತ್ರೀಕರಣದ ವೇಳೆ ನಿಯಮ ಉಲ್ಲಂಘಿಸಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ದಾಳಿ ನಡೆಸಿತ್ತು. ಅಲ್ಲದೇ ಅರಣ್ಯದಲ್ಲಿ ಮರಗಳನ್ನು ಕತ್ತರಿಸಿ ಬೃಹತ್ ಸೆಟ್ ನಿರ್ಮಿಸಲಾಗಿದೆ ಎಂದು ಅರಣ್ಯ ಇಲಾಖೆ ದೂರು ದಾಖಲಿಸಿಕೊಂಡಿತ್ತು.
ಚಿತ್ರೀಕರಣಕ್ಕೆ ಆಗುತ್ತಿರುವ ತೊಂದರೆ ಹಾಗೂ ವೈಯಕ್ತಿಕ ಕೌಟುಂಬಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ರಿಷಭ್ ಶೆಟ್ಟಿ ಪತ್ನಿ ಹಾಗೂ ಇಬ್ಬರ ಮಕ್ಕಳ ಜೊತೆ ವಾರಾಹಿ ಪಂಜುರ್ಲಿ ದೈವ ಉತ್ಸವಕ್ಕೆ ಆಗಮಿಸಿ ಕಷ್ಟ ಹೇಳಿಕೊಂಡಿದ್ದರು.



