ಮಂಗಳೂರು: ಆಹಾರ ಸುರಕ್ಷತೆಯ ತಪಾಸಣೆ ವೇಳೆ ಯಾರು ಎಷ್ಟೇ ದೊಡ್ಡವರಾದರೂ, ಸಣ್ಣವರಾದರೂ ರಕ್ಷಿಸಲು ಹೋಗುವುದಿಲ್ಲ,ನಮಗೆ ಜನರ ಆರೋಗ್ಯವೇ ಮುಖ್ಯವಾಗಿದ್ದು,ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಆರೋಗ್ಯವಂತ ಸಮಾಜ ನಿರ್ಮಾಣ ಆಗಬೇಕೆಂಬ ಉದ್ದೇಶದಿಂದ ಆಹಾರ ಕೊಡುವಂತಹ ಜಾಗಗಳು ಹಾಗೂ ಆಹಾರ ಉತ್ಪಾದನಾ ಕೇಂದ್ರಗಳನ್ನು ಗುರುತಿಸಿಕೊಂಡು ರಾಜ್ಯದ ಉದ್ದಗಲಕ್ಕೂ ತಪಾಸಣೆ ಪ್ರಾರಂಭಿಸಿದ್ದೇವೆ. ಈ ತಪಾಸಣೆ ಯಾರ ಮೇಲಿನ ಕೋಪದಿಂದಾಗಲಿ ಅಥವಾ ಪನಿಶ್ಮೆಂಟ್ ಮಾಡಬೇಕೆಂದಾಗಲಿ ಮಾಡುತ್ತಿರುವುದಲ್ಲ. ಅವರವರ ತಪ್ಪೇನಿದೆ ಎಂಬುದನ್ನು ತೋರಿಸಿ, ಜನರಿಗೆ ವಾಸ್ತವ ಪರಿಸ್ಥಿತಿ ಏನಿದೆ ಎಂಬುದನ್ನು ತಿಳಿಸಿಕೊಡುವುದು ನಮ್ಮ ಜವಾಬ್ದಾರಿ” ಎಂದರು.
ಬೆಂಗಳೂರಿನಲ್ಲಿ ಎಲ್ಲಾ ರೀತಿಯ ಔಟ್ಲೆಟ್ಗಳ ಮೇಲೆ ರೇಡ್ ಆದರೂ ಕೂಡ ಮಂಗಳೂರಿನಲ್ಲೂ ಅದೇ ರೀತಿ ಮಾಡುತ್ತಾರೆ ಎಂದರೆ ಅವರಿಗೆ ನಾವೇನು ಹೇಳಬೇಕು?. ನಿನ್ನೆ ಮಾಹಿತಿ ಬಂದ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಹೋಗಿ, ಪರಿಶೀಲನೆ ನಡೆಸಿ ತಕ್ಷಣ ಆ ಮಳಿಗೆಯನ್ನು ಸೀಲ್ ಮಾಡಿದ್ದಾರೆ. ಇಂಥ ತಪಾಸಣೆಗಳು ಎಲ್ಲಾ ಕಡೆ ಮುಂದೆಯೂ ನಡೆಯಲಿವೆ. ಹಾಗಾಗಿ ಎಲ್ಲರೂ ತಮ್ಮ ಕಿಚನ್, ಸ್ಟೋರ್ ಹಾಗೂ ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿ, ಎಲ್ಲಿಗೆ ಬೇಕಾದರೂ ನಾವು ದಾಳಿ ಮಾಡಬಹುದು” ಎಂದು ಎಚ್ಚರಿಸಿದರು.
ಪಿಜಿ ಮತ್ತು ಹಾಸ್ಟೆಲ್ಗಳ ಕುರಿತು ಮಾತನಾಡುತ್ತಾ, “ಸಾರ್ವಜನಿಕ ಸ್ಥಳಗಳು, ಹೋಟೆಲ್ಗಳು, ಕ್ಯಾಂಟೀನ್ಗಳು, ವಿಧಾನಸೌಧ, ವಿಕಾಸಸೌಧಗಳಲ್ಲಿ ತಪಾಸಣೆ ನಡೆಸಲಾಗಿದೆ. ಮುಂದಿನ ಹಂತದಲ್ಲಿ ಕೇಟರಿಂಗ್, ಪಿಜಿ ಸೆಂಟರ್ ಹಾಗೂ ಹಾಸ್ಟೆಲ್ಗಳನ್ನು ಗುರಿಯಾಗಿಸಿಕೊಂಡಿದ್ದೇವೆ. ಮನೆ ಬಿಟ್ಟು ಬರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಯುವಕ-ಯುವತಿಯರಿಗೆ ಊಟದ ಸಮಸ್ಯೆಯಿಂದ ಆರೋಗ್ಯ ಹದಗೆಟ್ಟಾಗ ತೀವ್ರ ತೊಂದರೆಯಾಗುತ್ತದೆ.
ನಿಮ್ಮಲ್ಲಿ ಬರುವವರನ್ನು ಸ್ವಂತ ಮಕ್ಕಳಂತೆ, ಸಂಬಂಧಿಕರಂತೆ ನೋಡಿಕೊಂಡು ಊಟದ ವ್ಯವಸ್ಥೆ ಮಾಡುವುದಾದರೆ ಮಾತ್ರ ಪಿಜಿ ತೆರೆಯಿರಿ. ಇಲ್ಲದಿದ್ದರೆ ಪಿಜಿ ತೆರೆಯಬೇಕಾದ ಅಗತ್ಯವೇ ಇಲ್ಲ. ಸರಿ ಇಲ್ಲದಿದ್ದರೆ ಈಗಲೇ ಸರಿಪಡಿಸಿಕೊಳ್ಳಿ, ನಾಳೆ ತಪಾಸಣೆಗೆ ಬಂದಾಗ ನಿಯಮ ಉಲ್ಲಂಘನೆಯಾಗಿದ್ದರೆ ಅಂತಹ ಪಿಜಿ ನಡೆಸಲು ಅನುಮತಿ ಕೊಡುವುದಿಲ್ಲ” ಎಂದು ಸಚಿವರು ತಿಳಿಸಿದರು.
ಹೈಟೆಕ್ ಲ್ಯಾಬ್ ನಿರ್ಮಾಣ:
ಮಳೆಗಾಲದಲ್ಲಿ ಕಲುಷಿತ ನೀರು ಮತ್ತು ಸಾಂಕ್ರಾಮಿಕ ರೋಗ, ವೈರಸ್ಗಳನ್ನು ನಿಯಂತ್ರಿಸಲು ಹೋಟೆಲ್ ಹಾಗೂ ಕ್ಯಾಂಟೀನ್ಗಳಲ್ಲಿ ಬಿಸಿ ನೀರನ್ನೇ ನೀಡಬೇಕು ಎಂದು ಈಗಾಗಲೇ ಆದೇಶ ಮಾಡಲಾಗಿದೆ. ಗ್ರಾಹಕರು ಕೇಳಿದರೆ ಮಾತ್ರ ತಣ್ಣೀರು ನೀಡಬೇಕು. ದೊಡ್ಡ ದೊಡ್ಡ ಕಂಪನಿಗಳ ಮೇಲೆ ದಾಳಿ ಮಾಡಿದಾಗ ಅವರು ಕೋರ್ಟ್ಗೆ ಹೋದರೂ ನಮ್ಮ ವರದಿಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಾಗದಂತೆ, ಸುಪ್ರೀಂ ಕೋರ್ಟ್ ಮಟ್ಟದಲ್ಲೂ ಮಾನ್ಯವಾಗುವ ಅತ್ಯುನ್ನತ ಗುಣಮಟ್ಟದ ರಾಜ್ಯ ಮಟ್ಟದ ಲ್ಯಾಬ್ ನಿರ್ಮಿಸುವ ಯೋಜನೆಯಿದೆ. ಇಲಾಖೆಯನ್ನು ಬಲಪಡಿಸಲು ಮತ್ತು ಸಿಬ್ಬಂದಿ ಕೊರತೆ ನೀಗಿಸಲು ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲಾಗುತ್ತಿದೆ ಎಂದರು.
ನಿಕೋಟಿನ್ ನಿಷೇಧ:
ಪಾನ್ ಮಸಾಲದಲ್ಲಿ ನಿಕೋಟಿನ್ ಮತ್ತು ಗುಟ್ಕಾ ಮಿಶ್ರಣವಾಗುವುದನ್ನು ಸರ್ಕಾರ ನಿಷೇಧಿಸಿದೆ. ಈ ಆದೇಶವನ್ನು ಯಾರೂ ಹಿಂಪಡೆದಿಲ್ಲ. ಇದರಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆ ಇಲ್ಲ, ಕೇವಲ ಗುಟ್ಕಾ ಕಂಪನಿ ಮಾಲೀಕರಿಗೆ ಮಾತ್ರ ತೊಂದರೆಯಾಗಬಹುದು” ಎಂದು ಹೇಳಿದರು.



