ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್ ಮನ್ ಗಳು ಸಿಡಿಸಿದ ಸಿಡಿಲಬ್ಬರದ ಅರ್ಧಶತಕಗಳ ಸಹಾಯದಿಂದ ಗುಜರಾತ್ ಟೈಟಾನ್ಸ್ ತಂಡ 89 ರನ್ ಗಳ ಭಾರೀ ಅಂತರದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟೂರ್ನಿಯಲ್ಲಿ ಅಗ್ರಸ್ಥಾನಕ್ಕೇರಿತು.
ಗುರುವಾರ ನಡೆದ ಲೀಗ್ ನ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಗೆ 229 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಸಿಎಸ್ ಕೆ 13.4 ಓವರ್ ಗಳಲ್ಲಿ 140 ರನ್ ಗೆ ಪತನಗೊಂಡಿತು. ಗೆಲ್ಲಲೇ ಬೇಕಾದ ನಿರ್ಣಾಯಕ ಪಂದ್ಯದಲ್ಲಿ ಹೀನಾಯ ಸೋಲುಂಡ ಸಿಎಸ್ ಕೆ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿತು.
ಕಠಿಣ ಗುರಿ ಬೆಂಬತ್ತಿದ ಸಿಎಸ್ ಕೆ ಖಾತೆ ತೆರೆಯುವ ಮುನ್ನವೇ ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಈ ಆಘಾತದಿಂದ ತಂಡ ಕೊನೆಯವರೆಗೂ ಹೊರಗೆ ಬರಲೇ ಇಲ್ಲ. ಮೊಹಮದ್ ಸಿರಾಜ್, ಕಾಗಿಸೊ ರಬಾಡಾ ಹಾಗೂ ಅಬ್ದುಲ್ ರಶೀದ್ ತಲಾ 3 ವಿಕೆಟ್ ಪಡೆದು ಸಿಎಸ್ ಕೆ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಸಿಎಸ್ ಕೆ ಪರ ಶಿವಂ ದುಬೆ ಮಾತ್ರ 17 ಎಸೆತಗಳಲ್ಲಿ 4 ಬೌಂಡರಿ ಮತ್ತು ಅಷ್ಟೇ ಸಂಖ್ಯೆ ಸಿಕ್ಸರ್ ನೊಂದಿಗೆ 47 ರನ್ ಬಾರಿಸಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಬೃಹತ್ ಮೊತ್ತ ದಾಖಲಿಸಲು ಮೂವರು ಬ್ಯಾಟ್ಸ್ ಮನ್ ಗಳು ಕಾರಣರಾದರು. ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಮೊದಲ ವಿಕೆಟ್ ಗೆ 12.2 ಓವರ್ ಗಳಲ್ಲಿ 125 ರನ್ ಜೊತೆಯಾಟ ನಿಭಾಯಿಸಿದರು.
ಸಾಯಿ ಸುದರ್ಶನ್ 53 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 84 ರನ್ ಸಿಡಿಸಿದರೆ, ಗಿಲ್ 37 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 64 ರನ್ ಚಚ್ಚಿದರು. ನಂತರ ಬಂದ ಜೋಸ್ ಬಟ್ಲರ್ 27 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 57 ರನ್ ಗಳಿಸಿದರು.



