ಮೈಸೂರು ಭಾಗದ ಜಲನಯನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂಧ ಭಾರೀ ಮಳೆಯಾಗುತ್ತಿದ್ದು, ತಲಕಾಡು ನಿಸರ್ಗಧಾಮ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.
ಸೋಮವಾರ ಸಂಜೆ ಭಾರೀ ಮಳೆಯಿಂದಾಗಿ ಗೋಪಾಲಸ್ವಾಮಿ ಬೆಟ್ಟದಲ್ಲಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದಿದೆ. ಇದರಿಂದ ಎರಡು ದಿನಗಳ ಕಾಲ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.
ಇದೇ ವೇಳೆ ನೀರಿನ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ, ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ತಲಕಾಡು ನಿಸರ್ಗ ಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಕೆಅರ್ ಎಸ್, ಕಬಿನಿ ಜಲಾಶಯದಿಂದ ಒಂದು ಲಕ್ಷಕ್ಕೂ ಹೆಚ್ಚು ನೀರು ಹೊರ ಬಿಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಲಕಾಡು ನಿಸರ್ಗಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ತಲಕಾಡು ಗ್ರಾಮದ ನಿಸರ್ಗಧಾಮ ಗೇಟ್ ಕ್ಲೋಸ್ ಮಾಡಿ ತಾಲೂಕು ಆಡಳಿತ ನೋಟಿಸ್ ಅಂಟಿಸಿದ್ದು, ಪ್ರವಾಸಿಗರು, ಸ್ಥಳೀಯರು ನದಿಗೆ ಇಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ನಿಸರ್ಗಧಾಮದ ಒಳಗಿನ ಬೋಟಿಂಗ್ ಸ್ಥಗಿತ ಮಾಡಲಾಗಿದೆ. ನದಿಯ ಸುತ್ತ ಪೊಲೀಸರ ಕಣ್ಗಾವಲು ಇಡಲಾಗಿದೆ.
ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ, ನುಗು ಹಾಗೂ ತಾರಕ ಜಲಾಶಯದಲ್ಲಿ ಹೊರ ಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಮೂರು ಜಲಾಶಯಗಳಿಂದ ನೀರು ಹೊರ ಬಿಡುತ್ತಿರುವುದರಿಂದ ಜಲಾಶಯಗಳ ಅಕ್ಕಪಕ್ಕಗಳಲ್ಲಿ ವಾಸ ಮಾಡುತ್ತಿರುವ ಜನರಿಗೆ, ಪ್ರವಾಹ ಭೀತಿ ಎದುರಾಗಿದೆ.



