ಉದ್ಯಮಿಯ ಕೊಲೆ ಪ್ರಕರಣದಲ್ಲಿ ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪೂಜಾ ಶುಕುನ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ಅಭಿಷೇಕ್ ಗುಪ್ತಾ ಅವರ ಕೊಲೆ ಪ್ರಕರಣದಲ್ಲಿ ರಾಜಸ್ಥಾನದ ಭರತ್ಪುರ ಜಿಲ್ಲೆಯ ಆಗ್ರಾ-ಜೈಪುರ ಹೆದ್ದಾರಿಯ ಲೋಧಾ ಬೈಪಾಸ್ ಬಳಿ ಶುಕ್ರವಾರ ತಡರಾತ್ರಿ ಪೂಜಾ ಪಾಂಡೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂಜಾ ಪಾಂಡೆ ಬಂಧನಕ್ಕೆ 50,000 ರೂ. ಬಹುಮಾನ ಘೋಷಿಸಲಾಗಿತ್ತು. ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.
ಸೆಪ್ಟೆಂಬರ್ 26 ರಂದು ಅಲಿಗಢ ನಗರದ ಹೊರವಲಯದಲ್ಲಿ ಬಸ್ ಹತ್ತುತ್ತಿದ್ದಾಗ ಅಭಿಷೇಕ್ ಗುಪ್ತಾ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಜಾ ಅವರ ಪತಿ ಅಶೋಕ್ ಪಾಂಡೆ ಮತ್ತು ಶಾರ್ಪ್ ಶೂಟರ್ ಮೊಹಮ್ಮದ್ ಫಜಲ್ ಮತ್ತು ಆಸಿಫ್ ಎಂಬವರನ್ನು ಪೊಲೀಸರು ಬಂಧಿಸಿದ್ದರು.
ವಿಚಾರಣೆ ವೇಳೆ ಪೂಜಾ ದಂಪತಿ ಸೂಚನೆಯ ಮೇರೆಗೆ ಹತ್ಯೆ ಮಾಡಿದ್ದಾಗಿ ಶಾರ್ಪ್ ಶೂಟರ್ಗಳು ತಿಳಿಸಿದ್ದರು. ಈ ಮಾಹಿತಿ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ.
ಉದ್ಯಮಿ ದಂಪತಿಗೆ ಪೂಜಾ ಪಾಂಡೆ ದೀರ್ಘ ಸಮಯದಿಂದ ಕಿರುಕುಳ ನೀಡುತ್ತಿದ್ದರು. ಹಣಕಾಸಿನ ವಿವಾದದಿಂದ ಪಾಂಡೆ ದಂಪತಿ ಕೊಲೆಗೆ ಸುಪಾರಿ ಕೂಡ ನೀಡಿದ್ದರು. ಸುಪಾರಿ ಪಡೆದಿದ್ದ ಇಬ್ಬರು ಶೂಟರ್ಗಳು ಪಾಂಡೆ ದಂಪತಿಗೆ ಪರಿಚಿತರಾಗಿದ್ದರಿಂದ ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.



