ಸ್ಪಿನ್ನರ್ ಗಳ ಬಲೆಗೆ ಬಿದ್ದ ಭಾರತ ತಂಡ ಎರಡನೇ ಇನಿಂಗ್ಸ್ ನಲ್ಲಿ 93 ರನ್ ಗಳ ಕಳಪೆ ಮೊತ್ತಕ್ಕೆ ಆಲೌಟಾಗಿದೆ. ಮೊದಲ ಟೆಸ್ಟ್ ಪಂದ್ಯವನ್ನು 30 ರನ್ ನೊಂದಿಗೆ ಗೆದ್ದ ದಕ್ಷಿಣ ಆಫ್ರಿಕಾ ತಂಡ ಭಾರತದ ನೆಲದಲ್ಲಿ 15 ವರ್ಷಗಳ ನಂತರ ಇದೇ ಮೊದಲ ಬಾರಿ ಟೆಸ್ಟ್ ಗೆದ್ದು ಇತಿಹಾಸ ನಿರ್ಮಿಸಿದೆ.
ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಭಾನುವಾರ 7 ವಿಕೆಟ್ ಗೆ 93 ರನ್ ಗೆ ಎರಡನೇ ಇನಿಂಗ್ಸ್ ಮುಕ್ತಾಯಗೊಂಡಿತು.
ಮೊದಲ ಇನಿಂಗ್ಸ್ ನಲ್ಲಿ 30 ರನ್ ಗಳ ಮುನ್ನಡೆ ಪಡೆದಿದ್ದ ಭಾರತ ತಂಡ ಎರಡನೇ ಇನಿಂಗ್ಸ್ ನಲ್ಲಿ 93 ರನ್ ಗೆ ಪತನಗೊಂಡು 30 ರನ್ ಗಳಿಂದ ಸೋಲುಂಡಿತು. ಗಾಯಗೊಂಡಿದ್ದ ಶುಭಮನ್ ಗಿಲ್ ಕಣಕ್ಕಿಳಿಯಲಿಲ್ಲ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ದಕ್ಷಿಣ ಆಫ್ರಿಕಾ ತಂಡ 15 ವರ್ಷಗಳ ನಂತರ ಭಾರತದ ನೆಲದಲ್ಲಿ ಮೊದಲ ಬಾರಿ ಟೆಸ್ಟ್ ಗೆದ್ದು ಇತಿಹಾಸ ಬರೆಯಿತು. ಅಲ್ಲದೇ ಟೆಂಬು ಭವುಮಾ ನೇತೃತ್ವದಲ್ಲಿ ಹರಿಣಗಳ ತಂಡ ಕಳೆದ 11 ಟೆಸ್ಟ್ ಗಳಲ್ಲಿ 10 ರಲ್ಲಿ ಜಯ ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅಗ್ರಸ್ಥಾನ ಪಡೆದರೆ, ಭಾರತ ತಂಡ 4ನೇ ಸ್ಥಾನಕ್ಕೆ ಕುಸಿಯಿತು.
ಎರಡನೇ ಇನಿಂಗ್ಸ್ ನಲ್ಲಿ ನಾಯಕ ಭವುಮಾ ಅರ್ಧಶತಕ ಬಾರಿಸಿ ತಂಡವನ್ನು ಆಧರಿಸಿದರು. 8ನೇ ವಿಕೆಟ್ ಗೆ ಭವುಮಾ ಮತ್ತು ಕಾರ್ಬಿನ್ ಬೋಶ್ಚ್ (25) 44 ರನ್ ಜೊತೆಯಾಟ ನಿಭಾಯಿಸಿ ತಂಡದ ಪರ ಹೋರಾಟ ನಡೆಸಿದರು.
124 ರನ್ ಗಳ ಸಾಧಾರಣ ಗುರಿ ಪಡೆದ ಭಾರತ ತಂಡ ಸತತವಾಗಿ ವಿಕೆಟ್ ಕಳೆದುಕೊಂಡು ಪರದಾಡಿತು. ಶುಭಮನ್ ಗಿಲ್ ಗಾಯಗೊಂಡಿದ್ದರಿಂದ ಎರಡನೇ ಇನಿಂಗ್ಸ್ ನಲ್ಲೂ ಕಣಕ್ಕಿಳಿಯಲಿಲ್ಲ.
ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ (92 ಎಸೆತಗಳಲ್ಲಿ 31 ರನ್) ಮತ್ತು ಅಕ್ಸರ್ ಪಟೇಲ್ (26 ರನ್ , 17 ಎಸೆತ, 1 ಬೌಂಡರಿ, 2 ಸಿಕ್ಸರ್), ರವೀಂದ್ರ ಜಡೇಜಾ (18) ಹೋರಾಟ ಸಾಕಾಗಲಿಲ್ಲ. ದಕ್ಷಿಣ ಆಫ್ರಿಕಾ ಪರ ಸಿಮೋನ್ ಹಾರ್ಮರ್ 4 ವಿಕೆಟ್ ಸೇರಿ ಒಟ್ಟಾರೆ 8 ವಿಕೆಟ್ ಪಡೆದರೆ, ಕೇಶವ್ ಮಹರಾಜ್ ಕೊನೆಯ ಎರಡು ಎಸೆತಗಳಲ್ಲಿ 2 ವಿಕೆಟ್ ಪಡೆದು ಭಾರತದ ಇನಿಂಗ್ಸ್ ಗೆ ತಿಲಾಂಜಲಿ ಹಾಡಿದರು.



