ಬೆಳಗಾವಿ: ಪ್ರೀತಿ ಹಾಗೂ ಅಂತರ್ಜಾತಿ ವಿವಾಹದ ಕಾರಣಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನೀಡಗಲಿ ಗ್ರಾಮದಲ್ಲಿ ಎರಡು ಕುಟುಂಬಗಳಿಗೆ ಕಳೆದ ಎರಡು ವರ್ಷಗಳಿಂದ ಅಮಾನವೀಯವಾಗಿ ‘ಸಾಮಾಜಿಕ ಬಹಿಷ್ಕಾರ’ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ನರಕಸದೃಶ ಜೀವನ:
ಕೀರ್ತಿ ಹಾಗೂ ಭೂತನಾಥ ಎಂಬುವವರು 2022ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮದ ಪ್ರಮುಖರು, ಅವರ ಕುಟುಂಬಗಳ ಮೇಲೆ ಕಟ್ಟುನಿಟ್ಟಿನ ಬಹಿಷ್ಕಾರ ಹೇರಿದ್ದಾರೆ. ಈ ಕುಟುಂಬಗಳೊಂದಿಗೆ ಮಾತನಾಡಿದರೆ 11,000 ರೂ. ದಂಡ ವಿಧಿಸುವ ಫರ್ಮಾನು ಹೊರಡಿಸಲಾಗಿದೆ. ಕುಡಿಯುವ ನೀರು, ದೇವಸ್ಥಾನ ಪ್ರವೇಶ ಹಾಗೂ ಅಂಗನವಾಡಿ ಸೌಲಭ್ಯವನ್ನೂ ಇವರಿಗೆ ನಿರಾಕರಿಸಲಾಗಿದೆ.
ಅಮಾನವೀಯತೆಯ ಪರಾಕಾಷ್ಠೆ:
ಭೂತನಾಥ ಅವರ ತಂದೆ ನಿಧನರಾದಾಗ ಅಂತಿಮ ಸಂಸ್ಕಾರಕ್ಕೂ ಅಡ್ಡಿಪಡಿಸಿ, ಸ್ಮಶಾನ ಬಳಸಲು 3,100 ರೂ. ದಂಡ ವಸೂಲಿ ಮಾಡಲಾಗಿದೆ ಎಂಬ ಆಘಾತಕಾರಿ ದೂರು ಕೇಳಿಬಂದಿದೆ.
ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಡಿ.ಎಸ್.ಎಸ್ ಎಚ್ಚರಿಕೆ:
ಈ ಅನಿಷ್ಟ ಪದ್ಧತಿಯ ವಿರುದ್ಧ ದಲಿತ ಸಂಘರ್ಷ ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸಂತ್ರಸ್ತರಿಗೆ ನ್ಯಾಯ ಒದಗಿಸದಿದ್ದರೆ ತೀವ್ರ ಹೋರಾಟ ಮಾಡುವುದಾಗಿ ತಹಶೀಲ್ದಾರರಿಗೆ ಎಚ್ಚರಿಕೆ ನೀಡಿದೆ.



