ಬೆಂಗಳೂರು: ತಡವಾಗಿ ಬಂದರೂ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಮುಂಗಾರು ಮಾರುತುಗಳು ದಿಢೀರನೆ ಚೆಲ್ಲಾಪಿಲ್ಲಿ ಆಗಿರುವುದರಿಂದ ಮುಂದಿನ 7 ದಿನಗಳ ಕಾಲ ಕರ್ನಾಟಕ ಸೇರಿದಂತೆ ದೇಶದಲ್ಲಿ ಮಳೆಯಾಗುವುದಿಲ್ಲ!
ಮೂರು ಸ್ಯಾಟಲೈಟ್ ಮೂಲಕ ತೆಗೆದ ಚಿತ್ರಗಳಲ್ಲಿ ಮುಂಗಾರು ಮಾರುತುಗಳು ಭಾರತ ಕಡಲ ತೀರದಲ್ಲಿ ಮಾಯಾವಾಗಿವೆ. ಇದರಿಂದ 7 ದಿನ ಮಳೆ ಆಗುವುದಿಲ್ಲ. ಜೂನ್ 23ರ ನಂತರ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈಗಾಗಲೇ ದೇಶಾದ್ಯಂತ ಶೇ.30ರಷ್ಟು ಮಳೆ ಕೊರತೆ ಉಂಟಾಗಿದ್ದು, ಮುಂಗಾರು ಆಶ್ರಿತ ರಾಜ್ಯಗಳಾದ ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಬರದ ಕರಿನೆರಳು ಆವರಿಸಿದೆ. ರಾಜಸ್ಥಾನ, ಗುಜರಾತ್ ಹಾಗೂ ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ನೀರಿಗೆ ಈಗಲೇ ಹಾಹಾಕಾರ ಉಂಟಾಗಿದ್ದು, ಜಲಾಶಯಗಳಲ್ಲಿ ನೀರಿನ ಅಭಾವ ತಗ್ಗಿಸಲು ಸರ್ಕಾರಗಳು ಮಿತವ್ಯಯ ಆರಂಭಿಸಿವೆ.
ಹವಾಮಾನ ಇಲಾಖೆ ಪ್ರಕಾರ ದೇಶದಲ್ಲಿ ಮುಂಗಾರು ಮಳೆ ಇದುವರೆಗೆ ಅಂದರೆ ಜೂನ್ 4ರಿಂದ 15ರವರೆಗೆ 19.2 ಮಿ.ಮೀ. ಮಾತ್ರ ಆಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 53.7 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಅವಧಿಯಲ್ಲಿಯೇ ಶೇ.64ರಷ್ಟು ಕೊರತೆ ಆಗಿದೆ. ಇದು ಕಳೆದ 20 ವರ್ಷಗಳಲ್ಲೇ ಕನಿಷ್ಠ ಮಳೆ ಎಂದು ದಾಖಲೆಗಳು ಹೇಳುತ್ತವೆ.
ಸಾಮಾನ್ಯವಾಗಿ ಜೂನ್ 9ರಿಂದ 11ರ ವೇಳೆಗೆ ಮುಂಗಾರು ಪಶ್ಚಿಮ ಕರಾವಳಿ ಪ್ರವೇಶಿಸಬೇಕಿತ್ತು. ಆದರೆ ಈ ಪ್ರದೇಶಗಳನ್ನು ಮುಂಗಾರು ತಲುಪಿಯೇ ಇಲ್ಲ.
ಮಹಾರಾಷ್ಟ್ರ ಮತ್ತು ಕೇಂದ್ರ ಅರಬಿಯನ್ ಸಮುದ್ರದಲ್ಲಿ ಹವಾಮಾನ ವೈಪರಿತ್ಯದಿಂದ ಮೋಡ ಶೇಖರಣೆಯಲ್ಲಿ ಬದಲಾವಣೆಗಳು ಆಗುತ್ತಿದ್ದು, ಜೂನ್ 20ರ ನಂತರ ಮತ್ತೆ ಮೋಡಗಳು ಸೇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದೇಶದ 723 ಜಿಲ್ಲೆಗಳ ಪೈಕಿ 103 ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆ ಆಗಿದೆ. 236 ಜಿಲ್ಲೆಗಳಲ್ಲಿ ಸಾಧಾರಣಕ್ಕಿಂತ ಕಡಿಮೆ ಮಳೆಯಾಗಿದೆ. 202 ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಆಗಿದೆ.



