ಹುಬ್ಬಳ್ಳಿ: ಕರ್ನಾಟಕ ತಂಡವನ್ನು ತವರಿನಲ್ಲೇ ಹಿಂದಿಕ್ಕಿದ ಜಮ್ಮು ಕಾಶ್ಮೀರ ತಂಡ ಮೊದಲ ಬಾರಿ ರಣಜಿ ಟ್ರೋಫಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಇತಿಹಾಸ ನಿರ್ಮಿಸಿದೆ.
ಹುಬ್ಬಳ್ಳಿಯ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ 2025-26ರ ಫೈನಲ್ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಜಮ್ಮು ಕಾಶ್ಮೀರ ರಣಜಿ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಮ್ಮು ಕಾಶ್ಮೀರ ತಂಡ 584 ರನ್ಗಳ ಬೃಹತ್ ಮೊತ್ತ ಕಲೆಹಾಕಿತ್ತು. ನಂತರ ಆಡಿದ ಕರ್ನಾಟಕ ತಂಡವನ್ನು 293 ರನ್ ಗಳಿಗೆ ಆಲೌಟ್ ಮಾಡಿ 291 ರನ್ ಮುನ್ನಡೆ ಸಾಧಿಸಿತ್ತು.
ಕರ್ನಾಟಕ ತಂಡದ ಮೇಲೆ ಫಾಲೋಆನ್ ಹೇರದ ಜಮ್ಮು ಕಾಶ್ಮೀರ ಎರಡನೇ ಇನಿಂಗ್ಸ್ ನಲ್ಲೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 4 ವಿಕೆಟ್ ಗೆ 342 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಅಲ್ಲದೇ ಕರ್ನಾಟಕ ತಂಡಕ್ಕೆ ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಅವಕಾಶ ನೀಡದೇ ಡ್ರಾ ಮಾಡಿಕೊಂಡಿತು.
ಪ್ರಥಮ ಇನ್ನಿಂಗ್ಸ್ನ ಮುನ್ನಡೆ ಆಧಾರದ ಮೇಲೆ ಜಮ್ಮು ಕಾಶ್ಮೀರ ತಂಡವು ಮೊದಲ ಬಾರಿಗೆ ರಣಜಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಪ್ರಶಸ್ತಿ ಜಯಿಸುತ್ತಿದ್ದಂತೆ ತಂಡದ ಆಟಗಾರರು ಮೈದಾನಕ್ಕೆ ಓಡಿ ಬಂದು ಸಂಭ್ರಮಾಚರಣೆ ಮಾಡಿದರು.
ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಕರ್ನಾಟಕ ತಂಡ ಫೈನಲ್ ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನೀರಸ ಪ್ರದರ್ಶನ ನೀಡಿತು. ಈ ಮೂಲಕ ಕರ್ನಾಟಕ 9ನೇ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತು.
ಜಮ್ಮು ಕಾಶ್ಮೀರದ ಬ್ಯಾಟ್ಸ್ ಮನ್ ಗಳನ್ನು ಕಟ್ಟಿಹಾಕಲು ಕರ್ನಾಟಕದ ಬೌಲರ್ ಗಳು ವಿಫಲರಾದರು. ಕೊನೆಗೆ ಕೆಎಲ್ ರಾಹುಲ್ ಅವರನ್ನು ಕೂಡ ದಾಳಿಗೆ ಇಳಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ.
ಸಾಕ್ಷಿಯಾದ ಸಿಎಂ ಓಮರ್ ಅಬ್ದುಲ್ಲಾ
ಜಮ್ಮು ಕಾಶ್ಮೀರ ತಂಡ ರಣಜಿ ಚಾಂಪಿಯನ್ ಆಗುವ ಸೂಚನೆ ಲಭಿಸುತ್ತಿದ್ದಂತೆ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸ್ವತಃ ಹುಬ್ಬಳ್ಳಿಗೆ ಆಗಮಿಸಿ ಪಂದ್ಯದ ಕೊನೆಯ ದಿನದಾಟವನ್ನು ವೀಕ್ಷಿಸುವ ಮೂಲಕ ಹುರಿದುಂಬಿಸಿದರು.
ಸಂಕ್ಷಿಪ್ತ ಸ್ಕೋರ್
ಜಮ್ಮು ಕಾಶ್ಮೀರ ಪ್ರಥಮ ಇನ್ನಿಂಗ್ಸ್: 584/10
ಕರ್ನಾಟಕ ಪ್ರಥಮ ಇನ್ನಿಂಗ್ಸ್: 293/10
ಜಮ್ಮು ಕಾಶ್ಮೀರ ದ್ವಿತೀಯ ಇನ್ನಿಂಗ್ಸ್: 342/4 ಡಿಕ್ಲೇರ್ (ಕಮ್ರಾನ್ ಇಕ್ಬಾಲ್ ಅಜೇಯ 160, ಸಾಹಿಲ್ ಲೊಟ್ರಾ ಅಜೇಯ 101, ಅಬ್ದುಲ್ ಸಮದ್ 32, ಪ್ರಸಿದ್ಧ್ ಕೃಷ್ಣ 42ಕ್ಕೆ 1, ವೈಶಾಖ್ 30ಕ್ಕೆ 1, ಶ್ರೇಯಸ್ ಗೋಪಾಲ್ 84ಕ್ಕೆ 1)



