ಲಕ್ನೋ: ಸುಲಭ ಗೆಲುವಿನ ಅವಕಾಶವಿದ್ದರೂ ಮುನ್ನಡೆ ಆಧಾರದ ಮೇಲೆ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದ ಕರ್ನಾಟಕ ತಂಡ ಕೊನೆಯ ದಿನ ಬ್ಯಾಟಿಂಗ್ ಅಭ್ಯಾಸಕ್ಕೆ ಬಳಸಿಕೊಂಡಿತು.
ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 736 ರನ್ ಗಳ ಬೃಹತ್ ಮೊತ್ತ ಪೇರಿಸಿದ್ದ ಕರ್ನಾಟಕ ತಂಡ ಉತ್ತರಾಖಂಡ್ ತಂಡವನ್ನು 233 ರನ್ ಗೆ ಆಲೌಟ್ ಮಾಡಿತು. ಫಾಲೋಆನ್ ಹೇರಿ ಗೆಲ್ಲುವ ಬದಲು ಎರಡನೇ ಇನಿಂಗ್ಸ್ ಆಡಲು ಇಳಿದ ಕರ್ನಾಟಕ ದಿನದಾಂತ್ಯಕ್ಕೆ 6 ವಿಕೆಟ್ ಗೆ 299 ರನ್ ಬಾರಿಸಿ ಭರ್ಜರಿ ಬ್ಯಾಟಿಂಗ್ ತಯಾರಿ ನಡೆಸಿತು.
149 ರನ್ ಗೆ 5 ವಿಕೆಟ್ ಕಳೆದುಕೊಂಡಿದ್ದ ಉತ್ತರಾಖಂಡ್ ತಂಡ ಆದಿತ್ಯ ರಾವತ್ ಕೊನೆಯ ಹಂತದಲ್ಲಿ ಹೋರಾಟ ನಡೆಸಿ 45 ರನ್ ಗಳಿಸಿದ್ದರಿಂದ ಮೊತ್ತ 233 ರನ್ ಗೆ ವಿಸ್ತರಿಸಿತು. ಕರ್ನಾಟಕದ ಪರ ವಿದ್ಯಾಧರ್ ಪಾಟೀಲ್ ಮತ್ತು ವಿಜಯಕುಮಾರ್ ತಲಾ 3 ವಿಕೆಟ್ ಗಳಿಸಿದರು.
ಕರ್ನಾಟಕ ತಂಡ ಮುನ್ನಡೆ ಆಧಾರದ ಮೇಲೆ ಫೈನಲ್ ಗೆ ಲಗ್ಗೆ ಹಾಕಿದ್ದು, ಬಂಗಾಳ ತಂಡವನ್ನು ಬಗ್ಗುಬಡಿದು ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಜಮ್ಮು ಕಾಶ್ಮೀರ ತಂಡವನ್ನು ಪ್ರಶಸ್ತಿ ಸುತ್ತಿನಲ್ಲಿ ಎದುರಿಸಲಿದೆ.
ಕರ್ನಾಟಕ ತಂಡದ ಪರ ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ರವಿಚಂದ್ರನ್ ಅಶ್ವಿನ್ ಎರಡನೇ ಇನಿಂಗ್ಸ್ ನಲ್ಲೂ ಶತಕ ಗಳಿಸಿದರು. ಸ್ಮರಣ್ 149 ಎಸೆತಗಳಲ್ಲಿ 12 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 129 ರನ್ ಗಳಿಸಿದರು.
ನಾಯಕ ದೇವದತ್ ಪಡಿಕ್ಕಲ್ ಕಣಕ್ಕಿಳಿಯಲಿಲ್ಲ. ಕರುಣ್ ನಾಯರ್ (8) ಮತ್ತು ಮಯಾಂಕ್ ಅಗರ್ವಾಲ್ (21), ಶ್ರೇಯಸ್ ಗೋಪಾಲ್ (0) ನಿರಾಸೆ ಮೂಡಿಸಿದರು. 6ನೇ ಕ್ರಮಾಂಕದಲ್ಲಿ ಆಡಲು ಇಳಿದ ಕೆಎಲ್ ರಾಹುಲ್ 67 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ 70 ರನ್ ಬಾರಿಸಿ ಅಜೇಯರಾಗಿ ಉಳಿದರು.
ಸಂಕ್ಷಿಪ್ತ ಸ್ಕೋರ್ ಕರ್ನಾಟಕ ಮೊದಲ ಇನಿಂಗ್ಸ್ 736. ಎರಡನೇ ಇನಿಂಗ್ಸ್ 6 ವಿಕೆಟ್ ಗೆ 299 (ಸ್ಮರಣ್ 127, ರಾಹುಲ್ ಅಜೇಯ 70, ಕೃತಿಕ್ ಕೃಷ್ಣ 52, ಅಭಯ್ ನೇಗಿ 53/2). ಉತ್ತರಾಖಂಡ್ ಮೊದಲ ಇನಿಂಗ್ಸ್ 233 (ಲಕ್ಷ್ಯ 55, ಆದಿತ್ಯ 45, ವಿದ್ಯಾಧರ್ ಪಾಟೀಲ್ 40/3, ವಿಜಯಕುಮಾರ್ 45/3).



