ಮಂಗಳೂರು: ಧರ್ಮಸ್ಥಳದ ಬೆಳವಣಿಗೆಯಿಂದ ಮಹಿಳೆಯರೇ ಹೆಚ್ಚು ಕಣ್ಣೀರಿಟ್ಟು ವೇದನೆ ಪಟ್ಟಿದ್ದಾರೆ. ಕೆಲವರು ಯಾವುದೇ ರೀತಿಯ ಹೋರಾಟಕ್ಕೆ ಪ್ರತಿಭಟನೆಗೆ ಸಿದ್ದರಿದ್ದಾರೆ. ಆದರೆ ಹೋರಾಟ ಅಗತ್ಯವಿಲ್ಲ ಎಲ್ಲವೂ ಮಂಜುನಾಥ ಸ್ವಾಮಿಗೆ ಬಿಟ್ಟಿದ್ದೇವೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಧರ್ಮಸ್ಥಳ ಅಪಪ್ರಚಾರ ಖಂಡಿಸಿ ಶನಿವಾರ ನಡೆದ ಜೈನ ಮುನಿಗಳ ಜೈನ ಮಠಗಳ ಭಟ್ಟಾರಕರ ಸಭೆಯಲ್ಲಿ ಮಾತನಾಡಿದ ಅವರು, ಎಸ್ಐಟಿ ತನಿಖೆ ನಡೆಯುತ್ತಿರುವುದರಿಂದ ಹೆಚ್ಚು ಮಾತನಾಡಬಾರದು ಎನ್ನುವ ಆದೇಶವಾಗಿದೆ ಎಂದು ಹೇಳಿದರು.
ಮಂಜುನಾಥನ ಭಕ್ತರೊಬ್ಬರು ನನಗೆ ಹೇಳಿದ್ದರು,ದೂರಿನ ಬೆಳವಣಿಗೆ ಆದಾಗಿನಿಂದ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಣ್ಣೀರು ಹಾಕಿದ್ದಾರೆ, ವೇದನೆ ಪಡುತ್ತಿದ್ದಾರೆ. ನಮಗೆ, ಕುಟುಂಬಕ್ಕೆ ನೆಮ್ಮದಿಯಿಲ್ಲ. ನೀವೇ ಏನಾದರೂ ಮಾಡಿ ಎಂದು ಹೇಳಿಕೊಂಡಿದ್ದರು, ಕೆಲ ಹೆಣ್ಣುಮಕ್ಕಳು ಯಾವುದೇ ರೀತಿಯ, ಹೋರಾಟಕ್ಕೆ, ಪ್ರತಿಭಟನೆಗೆ ತಯಾರಿದ್ದಾರೆ. ಅದರೆ ಅಂತಹ ಹೋರಾಟ ಅಗತ್ಯವಿಲ್ಲ. ಎಲ್ಲವೂ ಸ್ವಾಮಿ ಮೇಲೆ ಬಿಟ್ಟದ್ದೇವೆ, ಅದರ ಫಲ ಈಗ ಸಿಗುತ್ತಿದೆ ಎಂದು ತಿಳಿಸಿದರು.
ನಾವು ಮಾಡುವ ಪ್ರಯತ್ನಗಳಿಗೆ ಸ್ವಾಮಿಯ ಅನುಗ್ರಹ ಇದ್ದೇ ಇದೆ. ನಾವು ಸತ್ಯ ಬಿಟ್ಟು ಹಿಂದೆ ಹೋಗಿಲ್ಲ, ಮುಂದೆಯೂ ಹೋಗಲ್ಲ. ಆದ್ದರಿಂದ ಭಕ್ತರು ತಾಳ್ಮೆಯಿಂದಿರಬೇಕು. ಶಾಂತಿ ಕಾಪಾಡಬೇಕು ಎಂದು ಕರೆ ನೀಡಿದರು.
ಜನಿವಾರ ಇರೋದು ಜಾತಿ ವೇಷಕ್ಕಲ್ಲ, ಸತ್ಯಕ್ಕೆ ಎರಡು ಮುಖ ಇಲ್ಲ, ಒಂದೇ ಮುಖ. ವ್ಯಕ್ತಿ ಯಾವುದೇ ಧರ್ಮವಾಗಲಿ, ಆ ಧರ್ಮಕ್ಕೆ ಶರಣಾಗಬೇಕು. ಇಲ್ಲದಿದ್ದರೆ ಅವರು ಅನುಯಾಯಿಗಳೇ ಅಲ್ಲ. ಇಷ್ಟೊಂದು ಜನ ಶ್ರೀಗಳು ನಮಗೆ ಧೈರ್ಯ ಕೊಟ್ಟಿದ್ದಾರೆ. ಎಲ್ಲರ ಮೇಲೂ ಮಂಜುನಾಥನ ಆಶೀರ್ವಾದ ಇಲ್ಲಲಿ ಎಂದರಲ್ಲದೇ ಜನಿವಾರ ಜಾತಿ ವೇಷಕ್ಕಲ್ಲ, ಮೂರು ಧರ್ಮಗಳ ಆಚರಿಸೋದಕ್ಕಾಗಿ ಜನಿವಾರ ಧಾರಣೆ ಮಾಡ್ತೀವಿ. ಅದೇ ರೀತಿ ದಶಲಕ್ಷಣ ಇರೋದು ಪೂಜೆಗಲ್ಲ ಪ್ರಾರ್ಥನೆ ಮಾಡೋಕೆ ಎಂದು ಕಿವಿಮಾತು ಹೇಳಿದರು
ಶ್ರೀ ಕ್ಷೇತ್ರಕ್ಕೆ ಬಹಳ ವಿಶೇಷವಾದ ಕಳೆ ಬಂದಿದೆ. ಇಷ್ಟೊಂದು ಆಶಯಧಾರಿಗಳು, ಆಶೀರ್ವಚನ ನೀಡುತ್ತಿರುವುದು ತುಂಬಾ ದೊಡ್ಡದು. ಇಷ್ಟೊಂದು ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಬಂದಿರುವುದು ಸಂತಸ ತಂದಿದೆ. ಇಂದು ಮೂಡಬಿದ್ರೆ ಭಟ್ಟಾರಕರ ಪಟ್ಟಾಭೀಷೇಕದ ದಿನ, ಅವರು ಕೂಡ ನಿಮ್ಮೊಂದಿಗಿದ್ದೇವೆ ಎಂಬ ಸಂದೇಶ ಕೊಟ್ಟಿದ್ದಾರೆ ಇದಕ್ಕಿಂತ ದೊಡ್ಡ ಮಾತು ನನಗೆ ಬೇಡ ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಜೈನ ಸಂಘ ಸಂಸ್ಥೆಗಳಿಂದ ನೂರಾರು ಜನ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಧರ್ಮಸ್ಥಳ ಪ್ರವೇಶದ್ವಾರದಿಂದ ದೇಗುಲದ ವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಂಗಣದಲ್ಲಿ ಜೈನ ಸಮುದಾಯದ ಮುನಿಗಳು, ಜೈನ ಮಠಗಳ ಭಟ್ಟಾರಕರ ನೇತೃತ್ವದಲ್ಲಿ ವೇದಿಕೆ ಕಾರ್ಯಕ್ರಮ ನಡೆದು ರಾಜ್ಯದ ಜೈನ ಭಟ್ಟಾರಕರು ವೀರೇಂದ್ರ ಹೆಗ್ಗೆಡೆ ಅವರನ್ನು ಸನ್ಮಾನಿಸಿ ಗೌರವಿಸಿದರು.