ಕಸ ಹಾಕಿ ಬರುವುದಾಗಿ ಮನೆಯಿಂದ ಹೊರಗೆ ಬಂದ ಎರಡು ಮಕ್ಕಳ ತಾಯಿ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇಬ್ಬರು ಮಕ್ಕಳನ್ನು ಬಿಟ್ಟು ಪತ್ನಿ ಪರ ಪುರುಷನ ಜೊತೆ ಓಡಿ ಹೋಗಿದ್ದಾಳೆ ಎಂದು ಪತಿ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪರಾರಿಯಾಗಿರುವ ಪ್ರಿಯಾಂಕಾ ಮತ್ತು ಪತಿ ಶರತ್ ಕುಮಾರ್ಗೆ ಇಬ್ಬರು ಮಕ್ಕಳಿದ್ದು, ಬಾಗಲಗುಂಟೆಯಲ್ಲಿ ವಾಸವಾಗಿದ್ದರು.
ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ನಾನು ಮನೆಯಲ್ಲಿರುವಾಗಲೇ ಪ್ರಿಯಾಂಕಾ ತನ್ನ ಪ್ರಿಯಕರ ಪ್ರಭು ಜೊತೆ ಹೋಗಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ.
ಕೆಲಸಕ್ಕೆ ಹೋದ ಸಮಯದಲ್ಲಿ ನಮ್ಮ ಮನೆಯ ಬಳಿಯೇ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬಾತನನ್ನು ಭೇಟಿಯಾಗುತ್ತಿದ್ದಳು. ಜೊತೆಗೆ ಪ್ರಭು ಪ್ರಿಯಾಂಕಾಗೆ ಮೊಬೈಲ್ ಕರೆನ್ಸಿ ಹಾಕಿಸುತ್ತಿದ್ದು, ಇದೇ ವಿಚಾರಕ್ಕಾಗಿ ನಮ್ಮ ನಡುವೆ ಆಗಾಗ ಜಗಳ ಆಗುತ್ತಿತ್ತು ಎಂದು ಪತಿ ದೂರಿನಲ್ಲಿ ಆರೋಪಿಸಿದ್ದಾರೆ.
ಪತಿ ಶರತ್ ಪ್ರಿಯಾಂಕಾಗೆ ಹೀಗೆಲ್ಲ ಮಾಡಬೇಡ ಎಂದು ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿದ್ದರು. ಆದರೆ ಏ.11ರ ರಾತ್ರಿ 11:57ರ ಸುಮಾರಿಗೆ ಪ್ರಿಯಾಂಕಾ ಮನೆ ಬಿಟ್ಟು ಹೋಗಿದ್ದಾರೆ. ಮಧ್ಯರಾತ್ರಿ ಕಸ ಎಸೆದು ಬರುವುದಾಗಿ ಮನೆಯಿಂದ ಕಸದ ಬಕೆಟ್ ಹಿಡಿದು ಹೊರಟಿದ್ದಾಳೆ.
ಮೊದಲೇ ಸಿದ್ದಪಡಿಸಿಟ್ಟಿದ್ದ ಬಟ್ಟೆ ಬ್ಯಾಗ್ನ್ನು ಮನೆಯಲ್ಲಿನ ಪತಿ, ಮಕ್ಕಳಿಗೆ ಕಾಣದಂತೆ ಕಸದ ಜೊತೆ ಬ್ಯಾಗ್ ಸಮೇತ ಹೊರಗೆ ಬಂದಿದ್ದಾಳೆ. ಒಂದು ಕೈಯಲ್ಲಿ ಕಸದ ಬಕೆಟ್ ಮತ್ತು ಮತ್ತೊಂದು ಕೈಯಲ್ಲಿ ಬ್ಯಾಗ್ ಹಿಡಿದು ಹೊರಟಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.



