ನವದೆಹಲಿ: ತನಿಖೆ ಮುಗಿದಿರುವ ಗಂಭೀರವಲ್ಲದ ಪ್ರಕರಣಗಳಲ್ಲಿ ಆರೋಪಿಗಳಗೆ ಜಾಮೀನು ನೀಡಲು ಹಿಂಜರಿಕೆ ಏಕೆ ಎಂದು ಸುಪ್ರೀಂ ಕೋರ್ಟು ಅಧೀನ ನ್ಯಾಯಾಲಯಗಳನ್ನು ಪ್ರಶ್ನಿಸಿದೆ.
ಈಗಾಗಲೇ ತನಿಖೆ ಪೂರ್ಣಗೊಂಡಿದ್ದರೂ ಕೂಡ ವಿಚಾರಣಾ ನ್ಯಾಯಾಲಯಗಳು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು, ಪ್ರಜಾಪ್ರಭುತ್ವ ರಾಷ್ಟ್ರವು ಪೊಲೀಸ್ ರಾಜ್ಯದಂತೆ ಕಾರ್ಯ ನಿರ್ವಹಿಸಬಾರದು.
ಪೊಲೀಸ್ ರಾಜ್ಯದಲ್ಲಿ ಕಾನೂನು ಜಾರಿ ಸಂಸ್ಥೆಗಳು ಅವಶ್ಯಕತೆಯೇ ಇಲ್ಲದೆ ವ್ಯಕ್ತಿಗಳನ್ನು ಬಂಧಿಸಲು ಅನಿಯಂತ್ರಿತ ಅಧಿಕಾರವನ್ನು ಬಳಸುತ್ತವೆ ಎಂದಿದೆ.
ಎರಡು ದಶಕಗಳ ಹಿಂದೆ, ಸಣ್ಣ ಪ್ರಕರಣಗಳ ಜಾಮೀನು ಅರ್ಜಿಗಳು ಅತ್ಯಂತ ವಿರಳವಾಗಿ ಹೈಕೋರ್ಟ್ ಅಥವಾ ಉನ್ನತ ನ್ಯಾಯಾಲಯಕ್ಕೆ ಬರುತ್ತಿದ್ದವು. ಅಂತಹ ವಿಷಯಗಳನ್ನು ಸಾಮಾನ್ಯವಾಗಿ ಕೆಳ ನ್ಯಾಯಾಲಯದಲ್ಲೇ ಬಗಹರಿಸಲಾಗುತ್ತಿತ್ತು. ಆದರೆ, ಈಗ ಸಣ್ಣ ಪುಟ್ಟ ಪ್ರಕರಣಗಳ ಜಾಮೀನು ಅರ್ಜಿಗಳು ಸರ ಸುಪ್ರೀಂ ಕೋರ್ಟ್ ಅಂಗಳಕ್ಕೆ ಬರುತ್ತಿವೆ.
‘ವಿಚಾರಣಾ ನ್ಯಾಯಾಲಯದ ಮಟ್ಟದಲ್ಲಿಯೇ ವಿಲೇವಾರಿ ಮಾಡಬೇಕಾದ ಪ್ರಕರಣಗಳಲ್ಲಿನ ಜಾಮೀನು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತೀರ್ಮಾನಿಸುವಂತಾಗಿರುವುದು ಆಘಾತಕಾರಿ. ಇದು ಕಾನೂನು ವ್ಯವಸ್ಥೆಗೆ ಅನಗತ್ಯವಾಗಿ ಹೊರೆಯಾಗುತ್ತಿದೆ’ ಎಂದು ನ್ಯಾಯಮೂರ್ತಿ ಓಕಾ ಜಾಮೀನು ಅರ್ಜಿಯ ವಿಚಾರಣೆ ನಡೆಸುವಾಗ ಹೇಳಿದರು.
ಈ ವಿಷಯವನ್ನು ಸುಪ್ರೀಂ ಕೋರ್ಟ್ ಎತ್ತಿ ತೋರಿಸುತ್ತಿರುವುದು ಇದೇ ಮೊದಲಲ್ಲ. ವಿಶೇಷವಾಗಿ ಸಣ್ಣಪುಟ್ಟ ಅಪರಾಧಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಜಾಮೀನು ನೀಡುವಲ್ಲಿ ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್ಗಳು ಹೆಚ್ಚು ಉದಾರ ನಿಲುವನ್ನು ಅಳವಡಿಸಿಕೊಳ್ಳಬೇಕೆಂದು ಅದು ಪದೇ ಪದೆ ಒತ್ತಾಯಿಸಿದೆ.
ಕಸ್ಟಡಿ ಅಗತ್ಯವಿಲ್ಲದಿದ್ದಾಗ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ಮಹತ್ವವನ್ನು ಒತ್ತಿಹೇಳುವ ಹಲವಾರು ನಿರ್ದೇಶನಗಳ ಹೊರತಾಗಿಯೂ, ಕೆಳ ನ್ಯಾಯಾಲಯಗಳು ಜಾಮೀನು ನಿರಾಕರಿಸುವ ಮೂಲಕ ‘ಬೌದ್ಧಿಕ ಅಪ್ರಾಮಾಣಿಕತೆ’ ತೋರಿಸುತ್ತಿವೆ ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿತ್ತು. ವಿಚಾರಣೆಯ ಸಮಯದಲ್ಲಿ, ವಂಚನೆ ಪ್ರಕರಣದಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಬಂಧನದಲ್ಲಿದ್ದ ಆರೋಪಿಗೆ ಪೀಠ ಜಾಮೀನು ನೀಡಿತು.
ತನಿಖೆ ಪೂರ್ಣಗೊಂಡು ಆರೋಪಪಟ್ಟಿ ಸಲ್ಲಿಸಲಾಗಿದ್ದರೂ, ಆರೋಪಿಯ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಮತ್ತು ಗುಜರಾತ್ ಹೈಕೋರ್ಟ್ ಎರಡೂ ತಿರಸ್ಕರಿಸಿವೆ.
‘ಕೆಳ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸಬಹುದಾದ ಪ್ರಕರಣಗಳಲ್ಲಿಯೂ ಜಾಮೀನು ವಿಚಾರಗಳನ್ನು ಸುಪ್ರೀಂ ಕೋರ್ಟ್ ಮುಂದೆ ತರುತ್ತಿರುವುದು ದುರದೃಷ್ಟಕರ.
ಜನರಿಗೆ ಜಾಮೀನು ಸಿಗಬೇಕಾದ ಸಮಯದಲ್ಲಿ ಸಿಗುತ್ತಿಲ್ಲ ಎಂದು ಹೇಳಲು ನಮಗೆ ವಿಷಾದವಿದೆ’ ಎಂದು ನ್ಯಾಯಮೂರ್ತಿ ಓಕಾ ಹೇಳಿದರು.2022 ರಲ್ಲಿ ನಿರ್ದೇಶನ ನೀಡಿದೆ.