ದೆಹಲಿಯ ಐತಿಹಾಸಿಕ ಕೆಂಪುಕೋಟೆ ದ್ವಾರದ ಬಳಿ ಕಾರು ಸ್ಫೋಟಗೊಂಡ ಪರಿಣಾಮ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ ೬.೫೨ರ ಸುಮಾರಿಗೆ ಕೆಂಪುಕೋಟೆಯ ಮೆಟ್ರೋ ರೈಲಿನ ದ್ವಾರದ 1 ರ ಬಳಿಯ ಸಿಗ್ನಲ್ ನಲ್ಲಿ ಕಾರು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಹಲವು ವಾಹನಗಳಿಗೆ ಬೆಂಕಿಗೆ ಆಹುತಿಯಾಗಿದ್ದು, ೨೪ ಮಂದಿ ಗಾಯಗೊಂಡಿದ್ದಾರೆ.
ಹೈಂಡುವಿ ಐ10 ಕಾರಿನಲ್ಲಿ ಸ್ಫೋಟಕ ಸಾಗಿಸುತ್ತಿದ್ದಾಗ ಆಕಸ್ಮಿಕವಾಗಿ ಕಾರು ಸ್ಫೋಟಗೊಂಡಿದೆ. ವಾಹನದಟ್ಟಣೆ ನಡುವೆ ಕಾರು ಅತ್ಯಂತ ಪ್ರಬಲ ಸ್ಫೋಟಗೊಂಡ ಪರಿಣಾಮ ಹಲವು ಮಂದಿ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ..
ವಾಹನಗಳು ಸಂಚಾರ ದಟ್ಟಣೆ ಕಾರಣ ನಿಧಾನವಾಗಿ ಚಲಿಸುತ್ತಿದ್ದಾಗ ಕಾರು ಸ್ಫೋಟಗೊಂಡಿದೆ. ಕಾರು ನದೀಂ ಎಂಬವರ ಹೆಸರಿನಲ್ಲಿದ್ದು, ಹರಿಯಾಣ ರಾಜ್ಯದ ನೋಂದಣಿ ಹೊಂದಿದೆ ಎಂದು ಪೊಲೀಸ್ ಆಯುಕ್ತ ಸತೀಶ್ ಗೋಲಚಾ ತಿಳಿಸಿದ್ದಾರೆ.
ಅಮಿತ್ ಶಾ ತುರ್ತು ಸಭೆ
ಕೆಂಪುಕೋಟೆಯಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಘಟನೆಯ ಮಾಹಿತಿ ಪಡೆದರು. ಅಲ್ಲದೇ ದೆಹಲಿಯಲ್ಲಿ ಹೈಲರ್ಟ್ ಘೋಷಿಸಿದರು.
ದೆಹಲಿ ಅಲ್ಲದೇ ಬೆಂಗಳೂರು, ಮುಂಬೈ, ಕೋಲ್ಕತಾ, ಜೈಪುರ, ಹರಿಯಾಣ, ಪಂಜಾಬ್, ಹೈದರಾಬಾದ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ನಾಳೆ ಎರಡನೇ ಹಂತದ ವಿಧಾನಸಭಾ ಮತದಾನ ನಡೆಯಲಿರುವ ಬಿಹಾರದಲ್ಲಿ ಹಾಗೂ ಕೇರಳದಲ್ಲಿ ಕೂಡ ಕಟ್ಟೆಚ್ಚರ ವಹಿಸಲಾಗಿದೆ.
ಕೆಂಪುಕೋಟೆಯನ್ನು ಲಾಲ್ ಕಿಲಾ ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿಗೆ ಸಮೀಪವೇ ಕಾಂಗ್ರೆಸ್ ಹಳೆಯ ಕಚೇರಿ ಕೂಡ ಇದೆ. ದೇಶದ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಜಾಗ ಕೂಡ ಇದಾಗಿದೆ.


