ಪಾಟ್ನಾ: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಬಿಹಾರದಲ್ಲಿ ಏಕಾಏಕಿ ಅಪರಾಧ ಪ್ರಕರಣಗಳ ಸಂಖ್ಯೆ ಗಗನಕ್ಕೇರಿದ್ದು, ಜಂಗಲ್ ರಾಜ್ ಆಡಳಿತವನ್ನು ನೆನಪಿಗೆ ತರುವಂತಿದೆ. ಅದರಲ್ಲೂ ಆಸ್ಪತ್ರೆಗೆ ನುಗ್ಗಿದ ೫ ಮಂದಿ ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದಿಂಧ ದೇಶವೇ ಬೆಚ್ಚಿಬಿದ್ದಿದೆ.
ಈ ಹಿಂದೆ ಆರ್ಜೆಇಡಯ ಲಾಲು ಪ್ರಸಾದ್ ಯಾದವರ ಆಡಳಿತವನ್ನು ಜಂಗಲ್ ರಾಜ್ಗೆ ಹೋಲಿಸುತ್ತಿದ್ದ ನಿತೀಶ್ ಮತ್ತು ಬಿಜೆಪಿ ಆಡಳಿತಕ್ಕೇ ಈಗ ಈ ಮಸಿ ಅಂಟಿಕೊಂಡಿದೆ. ಈ ತಿಂಗಳ ಮೊದಲ ಎರಡು ವಾರಗಳಲ್ಲಿ 50ಕ್ಕೂ ಹೆಚ್ಚು ಹತ್ಯೆಗಳು ಸಂಭವಿಸಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.
ಪಟ್ನಾ, ಸಿತಾಮಡಿ, ನಲಂದಾ, ಮುಜಫ್ಫರ್ಪುರ, ಮತ್ತು ಪೂರ್ಣಿಯಾ ಜಿಲ್ಲೆಗಳಲ್ಲಿ ವ್ಯಾಪಾರಿಗಳು, ಶಿಕ್ಷಕರು, ವಕೀಲರು, ಮತ್ತು ಸರ್ಕಾರಿ ನೌಕರರು ಗುರಿಯಾಗಿದ್ದಾರೆ. ಭೂಮಿ ವಿವಾದ, ಆಸ್ತಿ ಜಗಳಗಳು, ಮತ್ತು ಅಕ್ರಮ ಶಸ್ತಾçಸ್ತçಗಳ ಲಭ್ಯತೆ ಈ ಅಪರಾಧಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರಗೆ ನುಗ್ಗಿ ಗುಂಡು
ಜುಲೈ 17ರಂದು ಪಟ್ನಾದ ಪಾರಸ್ ಆಸ್ಪತ್ರೆಯಲ್ಲಿ ನಡೆದ ಶೂಟೌಟ್ ಘಟನೆ ರಾಜ್ಯದ ಕಾನೂನು ವ್ಯವಸ್ಥೆಯ ಕುಸಿತಕ್ಕೆ ಕನ್ನಡಿ ಹಿಡಿದಿದೆ. ಗುರುವಾರ ಬೆಳಿಗ್ಗೆ ೭:೩೦ರ ಸುಮಾರಿಗೆ, ಪಿಸ್ತೂಲು ಹೊಂದಿದ್ದ 5 ಮಂದಿ ದುಷ್ಕರ್ಮಿಗಳು ಆಸ್ಪತ್ರೆಯ ಎರಡನೇ ಮಹಡಿಯ ಕೊಠಡಿ ಸಂಖ್ಯೆ 209ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದನ್ ಮಿಶ್ರಾ ಎಂಬ ಕೊಲೆ ಆರೋಪಿಯನ್ನು ಗುಂಡಿಟ್ಟು ಹತ್ಯೆ ಮಾಡಿದರು.
ಬಕ್ಸರ್ ಜಿಲ್ಲೆಯ ನಿವಾಸಿಯಾದ ಮಿಶ್ರಾ, ಆರೋಗ್ಯ ಸಮಸ್ಯೆಯಿಂದ ಪ್ಯಾರೋಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರತಿದ್ವಂದಿ ಚಂದನ್ ಶೇರು ಗ್ಯಾಂಗ್ನ ಸದಸ್ಯರು ಈ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದುಷ್ಕರ್ಮಿಗಳು ಕೆಲವೇ ಸೆಕೆಂಡ್ಗಳಲ್ಲಿ ಪರಾರಿಯಾದರು.
ಪೊಲೀಸರು ಶೂಟರ್ಗಳ ಫೋಟೋಗಳನ್ನು ಬಕ್ಸರ್ ಪೊಲೀಸರಿಗೆ ಹಂಚಿಕೊಂಡಿದ್ದು, ಆಸ್ಪತ್ರೆಯ ಭದ್ರತಾ ಸಿಬ್ಬಂದಿಯ ಸಹಕಾರದ ಶಂಕೆಯೂ ವ್ಯಕ್ತವಾಗಿದೆ. ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಉಳಿದ ನಾಲ್ವರ ಗುರುತು ಪತ್ತೆ ಹಚ್ಚಿ ಅವರ ಶೋಧ ಕಾರ್ಯ ಮುಂದುವರಿಸಿದ್ದಾರೆ.



