ಮೊದಲ ಇನಿಂಗ್ಸ್ ನಲ್ಲಿ ಭಾರೀ ಹಿನ್ನಡೆ ಅನುಭವಿಸಿದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಎರಡನೇ ಇನಿಂಗ್ಸ್ ನಲ್ಲಿ ತಿರುಗಿಬಿದ್ದಿದೆ.
ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ ಕರ್ನಾಟಕ ಮೊದಲ ಇನಿಂಗ್ಸ್ ನಲ್ಲಿ 191 ರನ್ ಗೆ ಆಲೌಟಾಯಿತು. 134 ರನ್ ಗಳ ಭಾರೀ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶ ದಿನದಾಂತ್ಯಕ್ಕೆ ಎರಡನೇ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 24 ರನ್ ಗಳಿಸಿದೆ.
ನಾಳೆ ಪಂದ್ಯದ ಕೊನೆಯ ದಿನವಾಗಿದ್ದು, ಕರ್ನಾಟಕ ಈಗಾಗಲೇ 336 ರನ್ ಗಳ ಭಾರೀ ಹಿನ್ನಡೆ ಅನುಭವಿಸಿದೆ. ಕರ್ನಾಟಕ ಒಂದು ವೇಳೆ ಎದುರಾಳಿ ತಂಡವನ್ನು ಬೇಗನೇ ಆಲೌಟ್ ಮಾಡಿ ವೇಗವಾಗಿ ರನ್ ಗಳಿಸಿದರೆ ಗೆಲ್ಲುವ ಸಾಧ್ಯತೆ ಇದೆ. ಡ್ರಾ ಮಾಡಿಕೊಂಡರೂ ಹಿನ್ನಡೆ ಆಧಾರದ ಮೇಲೆ ಅಂಕ ಕಳೆದುಕೊಳ್ಳುವ ಸಾಧ್ಯತೆ ಇದೆ.
ಕರ್ನಾಟಕ ತಂಡದ ಬೌಲರ್ ವಿಧ್ಯಾಧರ್ ಪಾಟೀಲ್ 3 ಮತ್ತು ಶಿಖರ್ ಶೆಟ್ಟಿ 2 ವಿಕೆಟ್ ಪಡೆದು ಎರಡನೇ ಇನಿಂಗ್ಸ್ ನಲ್ಲಿ ತಿರುಗೇಟು ನೀಡಿ ಮಧ್ಯಪ್ರದೇಶಕ್ಕೆ ಕಡಿವಾಣ ಹಾಕಿದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಆರಂಭಿಕ ಹಿಮಾಂಶು ಮಂತ್ರಿ 203 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ 89 ರನ್ ಬಾರಿಸಿ ತಂಡವನ್ನು ಆಧರಿಸಿದರು. ಎರಡನೇ ವಿಕೆಟ್ ಗೆ ಹಿಮಾಂಶು ಮತ್ತು ಶುಭಮನ್ ಶರ್ಮ (32) 62 ರನ್ ಜೊತೆಯಾಟ ನಿಭಾಯಿಸಿದ್ದೇ ದೊಡ್ಡ ಜೊತೆಯಾಟವಾಗಿತ್ತು.



