Monday, June 1, 2026
Google search engine
Homeರಾಜ್ಯರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡದೇ ಇರಲು ತುಮಕೂರು ವಿವಿ ನಿರ್ಧಾರ

ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡದೇ ಇರಲು ತುಮಕೂರು ವಿವಿ ನಿರ್ಧಾರ

ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡದೇ ಇರಲು ತುಮಕೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.

ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಾರಿ ರಾಜಕಾರಣಿಗಳಿಗೆ ಡಾಕ್ಟರೇಟ್ ನೀಡದಿರಲು ತೀರ್ಮಾನಿಸಲಾಗಿದೆ ಎಂದರು.

ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವವು ಜೂನ್ 3ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದ್ದು, ಈ ಬಾರಿ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡದಿರಲು ವಿವಿಯ ಪರಿಶೀಲನಾ ಸಮಿತಿ ಮಹತ್ವದ ನಿರ್ಧರಿಸಿದೆ ಎಂದರು.

ಈ ಬಾರಿ ಮಾಜಿ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ ಕೆ. ಎನ್. ರಾಜಣ್ಣಗೆ ಗೌರವ ಡಾಕ್ಟರೇಟ್​ ನೀಡಲು ನಿರ್ಧರಿಸಿದ್ದೆವು. ಆದರೆ ಪರಿಶೀಲನಾ ಸಮಿತಿ ಶಿಫಾರಸ್ಸಿನ ಮೇರೆಗೆ ನಿರ್ಧಾರ ಬದಲಾಯಿಸಲಾಗಿದೆ ಎಂದರು.

ತುಮಕೂರು ವಿಶ್ವವಿದ್ಯಾಲಯಕ್ಕೆ ಡಾ. ಜಿ. ಪರಮೇಶ್ವರ್ ಹಾಗೂ ಕೆ. ಎನ್. ರಾಜಣ್ಣ ಅವರ ಕೊಡುಗೆ ತುಂಬಾನೇ ಇದೆ. ಹೀಗಾಗಿ ಇಬ್ಬರಿಗೂ ಗೌರವ ಡಾಕ್ಟರೇಟ್ ನೀಡಬೇಕೆಂಬ ಆಶಯ ನಮಗಿತ್ತು. ಈ ನಿಟ್ಟಿನಲ್ಲಿ ನಾವು ಮೊನ್ನೆ ಇಬ್ಬರ ಹೆಸರುಗಳನ್ನು ಸೇರಿಸಿದ್ದೆವು. ಆದರೆ, ಪರಿಶೀಲನಾ ಸಮಿತಿಯು ಬೇರೆ ಬೇರೆ ರಾಜ್ಯಗಳಲ್ಲಿ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡುವ ನಿಯಮಗಳೇನು ಹಾಗೂ ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಯಾವ್ಯಾವ ರಾಜಕಾರಣಿಗಳು ಇದನ್ನು ಸ್ವೀಕರಿಸಿದ್ದಾರೆ ಅಥವಾ ನಿರಾಕರಿಸಿದ್ದಾರೆ ಎಂಬುದರ ಕುರಿತು ಚರ್ಚಿಸಲಾಗಿದೆ ಎಂದರು.

ಈ ಹಿಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸತೀಶ್ ಜಾರಕಿಹೊಳಿ ತಮಗೆ ಬಂದ ಗೌರವ ಡಾಕ್ಟರೇಟ್ ಅನ್ನು ತಿರಸ್ಕರಿಸಿದ್ದರು. ಅಲ್ಲದೆ, ಸಿದ್ದರಾಮಯ್ಯಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದಾಗ, ಅವರೇ ಖುದ್ದಾಗಿ ಕರೆದು ಈ ರೀತಿ ಕೊಡಬಾರದು ಎಂದು ಸಲಹೆ ನೀಡಿದ್ದರು. ಈ ಎಲ್ಲಾ ವಿಚಾರಗಳನ್ನು ಗಮನಿಸಿ ಇನ್ನು ಮುಂದೆ ಸಕ್ರಿಯ ರಾಜಕಾರಣಿಗಳಿಗೆ ಗೌರವ ಡಾಕ್ಟರೇಟ್ ನೀಡಬಾರದು ಎಂದು ಅಂತಿಮವಾಗಿ ನಿರ್ಧರಿಸಿದೆ ಎಂದರು.

ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

ರಾಜಕಾರಣಿಗಳನ್ನು ಹೊರತುಪಡಿಸಿ ಈ ಬಾರಿ ವಿವಿಧ ಕ್ಷೇತ್ರಗಳ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ನಿರ್ಧರಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಟಿ. ಆರ್. ರೇವಣ್ಣ, ಕನ್ನಡದ ಕವಿ, ವಚನಕಾರ ಹಾಗೂ ಚಿಂತಕ ದ್ವಾರನಕುಂಟೆ ಪಾತಣ್ಣ, ಮತ್ತು ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಹಾಗೂ ವೃತ್ತಿನಿರತ ವಕೀಲ ಎನ್. ಆರ್. ಪ್ರದೀಪ್ ಅವರಿಗೆ ಈ ಸಾಲಿನ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ.

ರಾಜ್ಯಪಾಲರಿಗೆ ಆಹ್ವಾನ

ಈ ಬಾರಿಯ ಘಟಿಕೋತ್ಸವಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್​ರಿಗೆ ಆಹ್ವಾನಿಸಲಾಗಿದ್ದು, ಮುಖ್ಯಮಂತ್ರಿಗಳ ಪದಗ್ರಹಣ ಕಾರ್ಯಕ್ರಮ ಇರುವುದರಿಂದ ಅವರು ಬರುವುದು ಇನ್ನೂ ಅಧಿಕೃತವಾಗಿಲ್ಲ. ಘಟಿಕೋತ್ಸವಕ್ಕೂ ಮುನ್ನ ರಾಜ್ಯಪಾಲರು ತುಮಕೂರು ವಿವಿಯಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ ತುಮಕೂರು ಇನ್ನೋವೇಶನ್ ಇನ್ ಕ್ಯುಬೇಶನ್ ಅಂಡ್ ಆಂತ್ರಪ್ರಿನ್ಯುರ್ ಶಿಪ್ ಕೌನ್ಸಿಲ್ ಹಾಗೂ ಗೋ ಗ್ರೀನ್- ಬೈಸಿಕಲ್ ಇನೀಶಿಯೇಟೀವ್ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಒಟ್ಟು 29 ಲಕ್ಷ ರೂ ವೆಚ್ಚದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪದವಿ ಹಾಗೂ ರ‍್ಯಾಂಕ್​ಗಳ ವಿವರ

ಇನ್ನು ಈ ಬಾರಿಯ ಘಟಿಕೋತ್ಸವದಲ್ಲಿ ಒಬ್ಬ ಅಭ್ಯರ್ಥಿಗೆ ಡಿ.ಲಿಟ್ ಪದವಿ, 59 ಅಭ್ಯರ್ಥಿಗಳಿಗೆ ಪಿಎಚ್.ಡಿ, 2,058 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 8,781 ಅಭ್ಯರ್ಥಿಗಳಿಗೆ ಸ್ನಾತಕ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ವಿಶ್ವವಿದ್ಯಾಲಯವು ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ‍್ಯಾಂಕ್​ಗಳನ್ನು ಘೋಷಿಸಿದ್ದು, ಒಟ್ಟು 90 ವಿದ್ಯಾರ್ಥಿಗಳಿಗೆ 117 ಚಿನ್ನದ ಪದಕಗಳನ್ನು ಹಾಗೂ ನಾಲ್ಕು ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ವಿತರಿಸಲಾಗುತ್ತಿದೆ ಎಂದು ಕುಲಪತಿಗಳು ಮಾಹಿತಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments