ಬೆಂಗಳೂರು: ಬೆಂಗಳೂರು-ಮಂಗಳೂರು ಸೇರಿದಂತೆ 2 ವಂದೇ ಭಾರತ್ ರೈಲುಗಳ ಸೇವೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು-ಮಂಗಳೂರುಗೆ ಶೀಘ್ರದಲ್ಲಿ ವಂದೇ ಭಾರತ್ ರೈಲು ಆರಂಭಿಸಲಾಗುವುದು ಎಂದರು.
ರಾಡಿ ಘಾಟ್ ಭಾಗದ ಮಾರ್ಗದಲ್ಲಿ ವಿದ್ಯುದೀಕರಣ ಪೂರ್ಣವಾಗಿದೆ. ಇನ್ನೂ, ಹಲವು ಸುರಕ್ಷತಾ ಪರೀಕ್ಷೆಗಳು ನಡೆಯಬೇಕಿವೆ. ಸುರಕ್ಷತಾ ದೃಢೀಕರಣ ಪತ್ರ ಬಂದ ಬಳಿಕ, ಸಂಸದರು, ಜನಪ್ರತಿನಿಧಿಗಳು ಸೇರಿ ಎಲ್ಲರಿಂದ ಸಲಹೆ ಪಡೆದು ವಂದೇ ಭಾರತ್ ರೈಲು ಸೇವೆಯ ವೇಳಾಪಟ್ಟಿ ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು.
ವಂದೇ ಭಾರತ್ ಕರ್ನಾಟಕದ ಕರಾವಳಿ ಭಾಗವನ್ನು ಸಂಪರ್ಕಿಸಲಿದೆ. ಮಂಗಳೂರು, ಉಡುಪಿ ಮುಖೇನ ಕಾರವಾರದವರೆಗೆ ವಂದೇ ಭಾರತ್ ರೈಲು ಸಂಚರಿಸಲಿದೆ. ಕರಾವಳಿ ಕರ್ನಾಟಕದ ಅತಿ ಉದ್ದದ ಮಾರ್ಗವನ್ನು ಸಂಪರ್ಕಿಸುವ ಕಾರಣ ಎರಡು ವಂದೇ ಭಾರತ್ ರೈಲು ಸೇವೆಯನ್ನು ಆರಂಭಿಸಲಾಗುವುದು. ಒಂದು ಕೋಸ್ಟಲ್ ನಿಂದ ಬೆಂಗಳೂರು, ಮತ್ತೊಂದು ಬೆಂಗಳೂರಿನಿಂದ ಕೋಸ್ಟಲ್ ಜಿಲ್ಲೆಗಳಿಗೆ ವಂದೇ ಭಾರತ್ ರೈಲು ಓಡಾಡಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕಲಬುರಗಿ ಜಿಲ್ಲೆಗೂ ವಂದೇ ಭಾರತ್ ಸೇವೆ ವಿಸ್ತರಿಸಲು ಯೋಜಿಸಲಾಗಿದೆ. ಕರ್ನಾಟಕದ ಪ್ರತಿ ಜಿಲ್ಲೆಗಳಿಗೂ ವಂದೇ ಭಾರತ್ ಸೇವೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.



