ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ಬಳಸಿ ವಂಚಿಸಿರುವ ಐಶ್ವರ್ಯಾ ಗೌಡ ಮತ್ತು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ನಡುವೆ ಕೋಟ್ಯಂತರ ರೂಪಾಯಿ ವ್ಯವಹಾರ ನಡೆದಿರುವುದು ಇಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಇಡಿ ಅಧಿಕಾರಿಗಳು ಐಶ್ವರ್ಯಾ ಗೌಡ, ಶಾಸಕ ವಿನಯ್ ಕುಲಕರ್ಣಿ ಹಾಗೂ ಶಿಲ್ಪಾಗೌಡ ನಿವಾಸ ಸೇರಿ 14 ಕಡೆ ದಾಳಿ ನಡೆಸಿದಾಗ ಹಣದ ವ್ಯವಹಾರ ನಡೆದಿರುವುದು ಪತ್ತೆ ಹಚ್ಚಿದ್ದು, ಈ ಸಂಬಂಧ ಮಹತ್ವದ ದಾಖಲೆಗಳನ್ನು ಕಲೆಹಾಕಿದ್ದಾರೆ.
ಶಾಸಕ ವಿನಯ್ ಕುಲಕರ್ಣಿ ಮತ್ತು ಐಶ್ವರ್ಯ ಗೌಡ ಇಬ್ಬರೂ ಸೇರಿ ಕೋಟ್ಯಂತರ ರೂ. ವ್ಯವಹಾರ ಮಾಡಿದ್ದು, ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಐಶ್ವರ್ಯ ಗೌಡ ಸಹಾಯ ಮಾಡಿದ್ದರು ಎಂಬ ಸ್ಫೋಟಕ ಮಾಹಿತಿ ಲಭಿಸಿದೆ ಎಂದು ಹೇಳಲಾಗಿದೆ.
ವಿನಯ್ ಕುಲರ್ಣಿ ಬಳಿ 24 ಕೋಟಿ ರೂ. ಸಾಲ ಪಡೆದಿದ್ದ ಐಶ್ವರ್ಯ ಗೌಡ, ದಿನಕ್ಕೆ 24 ಲಕ್ಷ ರೂ. ಬಡ್ಡಿ ಕೊಡುವುದಾಗಿ ಹೇಳಿದ್ದರು ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಇಡಿ ಅಧಿಕಾರಿಗಳು 26 ಗಂಟೆಗಳ ಕಾಲ ತಪಾಸಣೆ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ವಿನಯ್ ಕುಲಕರ್ಣಿ ಬಳಿ 24 ಕೋಟಿ ಸಾಲದ ರೂಪದಲ್ಲಿ ಪಡೆದಿದ್ದ ಐಶ್ವರ್ಯಾ, ದಿನಕ್ಕೆ ಶೇ.1ರಷ್ಟು ಬಡ್ಡಿ ಅಂದರೆ ದಿನಕ್ಕೆ 24 ಲಕ್ಷ ರೂ. ಬಡ್ಡಿ ಕೊಡುವುದಾಗಿ ಹಣ ಪಡೆದಿದ್ದಳು. ಆದರೆ, ಹಣ ಪಡೆದ ನಂತರ ಅಸಲು, ಬಡ್ಡಿ ಕೊಡದೆ ಸಮಯ ಕೇಳಿಕೊಂಡಿದ್ದಳು. ಆಗ ವಿನಯ್ ಕುಲಕರ್ಣಿ ಐಶ್ವರ್ಯಾ ಜತೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡಿರುವುದು ತನಿಖೆ ವೇಳೆ ಗೊತ್ತಾಗಿದೆ.
24 ಕೋಟಿ ರೂ. ಹಣಕ್ಕೆ ಸ್ನೇಹಿತನ ಹೆಸರಿನಲ್ಲಿ ಕೈಸಾಲ ಪಡೆದಿದ್ದಾಗಿ ಅಗ್ರಿಮೆಂಟ್. ಜೊತೆಗೆ ಮಾಫಿ ಸಾಕ್ಷಿ ಟ್ರ್ಯಾಪ್ ಮಾಡುವಂತೆ ಶಾಸಕ ವಿನಯ್ ಕುಲರ್ಣಿ ಟಾಸ್ಕ್ ನೀಡಿದ್ದರು.



