ಹಾವೇರಿ: ಅಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನ ಮದುವೆ ಆಗಲಿ ಅಡ್ಡಿ ಎಂಬ ಕಾರಣಕ್ಕೆ ಪ್ರಿಯಕರ ಜೊತೆ ಸೇರಿ ಪತಿಯನ್ನು ಕೆರೆಗೆ ತಳ್ಳಿ ಪತ್ನಿ ಕೊಲೆ ಮಾಡಿರುವ ಘಟನೆ ಹಾವೇರಿಯ ರಟ್ಟಿಹಳ್ಳಿ ತಾಲೂಕಿನಲ್ಲಿ ನಡೆದಿದೆ.
ಹರಿಹರ ಮೂಲದ ಶಫಿವುಲ್ಲಾ ಅಬ್ದುಲ್ ಮಹೀಬ್ (38) ಕೊಲೆಯಾದ ಪತಿ ಎಂದು ಗುರುತಿಸಲಾಗಿದೆ. ಆರೋಪಿಗಳಾದ ಪತ್ನಿ ಶಹೀನಾಬಾನು ಹಾಗೂ ಆಕೆಯ ಪ್ರಿಯಕರ ಮುಬಾರಕ್ ಖಲಂದರಸಾಬ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮುಬಾರಕ್ ಖಲಂದರಸಾಬ್ ಮತ್ತು ಶಹೀನಾಬಾನು ಮಧ್ಯೆ ಅನೈತಿಕ ಸಂಬಂಧ ಇತ್ತು. ಮುಬಾರಕ್ ಖಲಂದರಸಾಬ್ನನ್ನು ಮದುವೆ ಆಗುವಂತೆ ಶಹೀನಾಬಾನು ಪೀಡಿಸುತ್ತಿದ್ದಳು. ನಮ್ಮಿಬ್ಬರ ಮದುವೆಗೆ ನಿನ್ನ ಪತಿ ಅಡ್ಡಿಯಾಗ್ತಾನೆ ಎಂದು ಹೇಳಿದ್ದ.
ಇಬ್ಬರೂ ಸೇರಿ ಶಫೀವುಲ್ಲಾ ಕೊಲೆಗೆ ಸಂಚು ರೂಪಿಸಿದ್ದರು. ಬಳಿಕ ಮುಬಾರಕ್ ಖಲಂದರಸಾಬ್, ಶಫೀವುಲ್ಲಾ ಜೊತೆ ಗೆಳೆತನ ಬೆಳಸಿ ಮನೆಗೆ ಬಂದು ಹೋಗಿ ಮಾಡುತ್ತಿದ್ದ. ಜು. 27ರಂದು ಕೆರೆ ನೋಡಲು ಹೋಗೋಣ ಎಂದು ಪುಸಲಾಯಿಸಿ ಶಫೀವುಲ್ಲಾನನ್ನು ಕೆರೆ ಕಡೆ ಕರೆದುಕೊಂಡು ಹೋಗಿದ್ದ.
ಮದಗಮಾಸೂರು ಕೆರೆ ಬಳಿ ಎಣ್ಣೆ ಪಾರ್ಟಿ ಮಾಡಿ, ಬಳಿಕ ಶಫೀವುಲ್ಲಾನನ್ನು ಕೆರೆಗೆ ತಳ್ಳಿದರು. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಿದ್ದರು. ಮೃತದೇಹ ಪತ್ತೆಯಾದ ಬಳಿಕ, ದೇಹದಲ್ಲಿ ಗಾಯಗಳಿರುವುದು ಕಂಡು ಅನುಮಾನ ಮೂಡಿತ್ತು. ಪೊಲೀಸರು ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದರು.
ಈ ವೇಳೆ ಆರೋಪಿಗಳು ಕೊಲೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇದೀಗ ಹಿರೇಕೆರೂರು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.



