ದರೋಡೆ ನೆಪದಲ್ಲಿ ಪತ್ನಿಯ ಕೊಲೆ ಸಂಚಿನಲ್ಲಿ ಹಲ್ಲೆಗೊಳಗಾಗಿದ್ದ ಪತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಮೈಸೂರಿನ ನಂಜನಗೂಡಿನಲ್ಲಿ ಸಂಭವಿಸಿದೆ.
೨೦ ದಿನಗಳ ಹಿಂದ ಡ್ರ್ಯಾಗರ್ ಹಾಗೂ ಲಾಂಗ್ನಿಂದ ಹಲ್ಲೆಗೊಳಗಾದ ರಾಜೇಂದ್ರ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು. ಭಾನುವಾರ ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಕೊಲೆಗೆ ದರೋಡೆ ತಂತ್ರ ರೂಪಿಸಿದ್ದ ಪತ್ನಿ ಸಂಗೀತಾ ಹಾಗೂ ಸಹಚರರು ಜೈಲು ಪಾಲಾಗಿದ್ದಾಳೆ.
ಅ.26ರಂದು ನಂಜನಗೂಡಿನ ಹುಂಡುವಿನಹಳ್ಳಿ ಬಡಾವಣೆಯಲ್ಲಿ ರಾಜೇಂದ್ರ ಅವರು ಪತ್ನಿ ಸಂಗೀತಾ ಜೊತೆ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಮೂವರು ದಾಳಿ ಮಾಡಿ ರಾಜೇಂದ್ರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ದರೋಡೆ ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಪಟ್ಟಣ ಪೊಲೀಸರು, ವಿಶೇಷ ತಂಡ ರಚಿಸಿ ದುಷ್ಕರ್ಮಿಗಳ ಸೆರೆಗೆ ಜಾಲ ಬೀಸಿದ್ದರು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರಿಗೆ ಪತ್ನಿಯ ತಂತ್ರ ಗೊತ್ತಾಗಿತ್ತು.
ಪತಿಯ ಕೊಲೆಗೆ ದರೋಡೆ ಬಣ್ಣ ಕಟ್ಟಿ ಸ್ವಂತ ತಮ್ಮನಿಗೇ ಸುಪಾರಿ ನೀಡಿ ಹತ್ಯೆಗೆ ಯತ್ನಿಸಿದ್ದು ಬಯಲಾಗಿತ್ತು. ತೀವ್ರ ಹಲ್ಲೆಗೊಳಗಾಗಿದ್ದ ರಾಜೇಂದ್ರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



