ಭಾರತವನ್ನು ಅವರದ್ದೇ ಯುದ್ಧ ವಿಮಾನಗಳ ಆವಶೇಷಗಳಡಿ ಹೂತು ಹಾಕುತ್ತೇವೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ.
ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲ ನಿಲ್ಲಿಸದೇ ಇದ್ದರೆ ವಿಶ್ವ ಭೂಪಟದಿಂದ ಪಾಕಿಸ್ತಾನವನ್ನು ಅಳಿಸಿ ಹಾಕಲಾಗುವುದು ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನ ರಕ್ಷಣಾ ಸಚಿವ ಪ್ರತ್ಯುತ್ತರ ನೀಡಿದ್ದಾರೆ.
ಯಾವುದೇ ದುಸ್ಸಾಹಸಕ್ಕೆ ಕೈಹಾದಂತೆ ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಭಾರತೀಯ ಸೇನಾ ಮುಖ್ಯಸ್ಥರ ಹೇಳಿಕೆಗಳನ್ನು ಪ್ರಸ್ತಾಪಿಸಿದ ರಕ್ಷಣಾ ಸಚಿವ ಖ್ವಾಜಾ ಆಸೀಫ್, ಆಪರೇಷನ್ ಸಿಂಧೂರ್ ವಿಫಲವಾಗಿದ್ದರೂ ಯಶಸ್ವಿ ಎಂದು ಬಿಂಬಿಸಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
“ಭಾರತೀಯ ಮಿಲಿಟರಿ ಮತ್ತು ರಾಜಕೀಯ ನಾಯಕತ್ವದ ಹೇಳಿಕೆಗಳು ತಮ್ಮ ಕಳಂಕಿತ ಖ್ಯಾತಿಯನ್ನು ಪುನಃಸ್ಥಾಪಿಸಲು ವಿಫಲ ಪ್ರಯತ್ನವಾಗಿದೆ. ದಾಳಿಯಲ್ಲಿ 0-6 ಅಂಕಗಳೊಂದಿಗೆ ಸೋತಿರುವ ಭಾರತ ಇಂತಹ ಪ್ರಯತ್ನ ಮುಂದುವರಿಸಿದರೆ ದೇವರು ಬಯಸಿದರೆ, ಅಂಕಗಳು ಮೊದಲಿಗಿಂತ ಉತ್ತಮವಾಗಿರುತ್ತದೆ ಎಂದು ಆಸಿಫ್ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
0-6 ಅಂಕಗಳಿಂದ ಗೆದ್ದಿದ್ದೇವೆ ಎಂದು ಖ್ವಾಜಾ ಹೇಳಿಕೊಂಡರೂ ಅದರ ವಿವರಣೆ ನೀಡಲಿಲ್ಲ. ಆದರೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕಿಸ್ತಾನವು 6 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬ ಅರ್ಥದಲ್ಲಿ ಹೇಳಿದೆ ಎಂದು ಭಾವಿಸಲಾಗಿದೆ.
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಮೇ 7 ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಲಾಯಿತು ಮತ್ತು ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿತು. ಈ ದಾಳಿಗಳು ನಾಲ್ಕು ದಿನಗಳ ತೀವ್ರ ಘರ್ಷಣೆಗಳಿಗೆ ಕಾರಣವಾಯಿತು, ಇದು ಮೇ 10 ರಂದು ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಬಗ್ಗೆ ಒಪ್ಪಂದದೊಂದಿಗೆ ಕೊನೆಗೊಂಡಿತು.
ಭಾರತೀಯ ಸೇನೆಯು ಪಾಕಿಸ್ತಾನದ ವಿವಿಧ ಸೇನಾ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದ ನಂತರ ಪಾಕಿಸ್ತಾನವು ಮೇ ತಿಂಗಳಲ್ಲಿ ಯುದ್ಧವನ್ನು ಕೊನೆಗೊಳಿಸಲು ಮನವಿ ಮಾಡಿದೆ ಎಂದು ಭಾರತ ಹೇಳುತ್ತಿದೆ.



