ಪ್ರಿಯಕರನನ್ನು ಭೇಟಿ ಮಾಡಲು 600 ಕಿ.ಮೀ. ದೂರದವರೆಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ ಮಹಿಳೆ ಮಾರನೇ ದಿನ ಶವವಾಗಿ ಪತ್ತೆಯಾದ ಘಟನೆ ರಾಜಸ್ಥಾನ್ ನ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.
ಜುನ್ ಜುನ್ ನಲ್ಲಿ ಅಂಗನವಾಡಿ ಶಾಲೆಯ ಸೂಪರ್ ವೈಸರ್ ಆಗಿದ್ದ 37 ವರ್ಷದ ಮಹಿಳೆ ಮುಖೇಶ್ ಕುಮಾರಿ ಕೊಲೆಯಾಗಿದ್ದಾರೆ. ಫೇಸ್ ಬುಕ್ ನಲ್ಲಿ ಪರಿಚಿತನಾಗಿದ್ದ ಬಾರ್ಮರ್ ನ ಶಿಕ್ಷಕ ಮನರಾಮ್ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮುಖೇಶ್ ಅವರ ಗಂಡನಿಗೆ ಡಿವೋರ್ಸ್ ನೀಡಿ ದಶಕವೇ ಕಳೆದಿತ್ತು. ಜೀವನದಲ್ಲಿ ನೆಲೆ ಕಂಡುಕೊಳ್ಳಲು ಹುಡುಕುತ್ತಿದ್ದಾಗ ಕಳೆದ ವರ್ಷ ಅಕ್ಟೋಬರ್ ನಲ್ಲಿ ಫೇಸ್ ಬುಕ್ ನಲ್ಲಿ ಮನರಾಮ್ ಪರಿಚಯವಾಗಿದ್ದ.
ಪರಸ್ಪರ ಪರಿಚಯದ ನಂತರ ಇಬ್ಬರೂ ಭೇಟಿಯಾಗಿದ್ದು, ಮದುವೆ ಆಗುವ ಮೂಲಕ ಜೀವನದಲ್ಲಿ ನೆಲೆ ಕಂಡುಕೊಳ್ಳಲು ನಿರ್ಧರಿಸಿದ್ದ ಮುಖೇಶ್ ಕುಮಾರಿ 600 ಕಿ.ಮೀ. ದೂರದಲ್ಲಿದ್ದ ಪ್ರಿಯಕರನನ್ನು ಭೇಟಿ ಮಾಡಲು ಕಾರಿನಲ್ಲಿ ತೆರಳಿದ್ದರು.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮನರಾಮ್ ಅರ್ಜಿ ವಿಚಾರಣೆ ಹಂತದಲ್ಲಿತ್ತು. ಈ ಹಂತದಲ್ಲಿ ಆಕೆ ಪದೇಪದೆ ಮದುವೆಗೆ ಒತ್ತಡ ಹಾಕಿದ್ದರಿಂದ ಮನರಾಮ್ ವಿಚಲಿತನಾಗಿದ್ದ. ಮದುವೆಗೆ ಆತುರ ಬಿದ್ದ ಆಕೆ ನೇರ ಮನರಾಮ್ ಮನೆಗೆ ಹೋಗಿ ತಮ್ಮಿಬ್ಬರ ನಡುವಿನ ಸಂಬಂಧ ಕುರಿತು ಹೇಳಿಕೊಂಡಿದ್ದಳು. ಇದರಿಂದ ಮನರಾಮ್ ಮತ್ತು ಆಕೆ ನಡುವೆ ಜಗಳ ಉಂಟಾಗಿತ್ತು. ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ವಿವಾದವನ್ನು ಕೌಟುಂಬಿಕ ನೆಲೆಯಲ್ಲಿಯೇ ಬಗೆಹರಿಸಿಕೊಳ್ಳಲು ಸಲಹೆ ನೀಡಿದ್ದರು. ಇಬ್ಬರು ಮಾತನಾಡಿಕೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಮಾತನಾಡಲು ಹೊರಗೆ ಹೋದಾಗ ಕಬ್ಬಿಣದ ರಾಡ್ ನಿಂದ ಮುಖೇಶ್ ತಲೆಗೆ ಬಾರಿಸಿ ಮನರಾಮ್ ಕೊಲೆ ಮಾಡಿದ್ದ.
ಮುಖೇಶ್ ಳನ್ನು ಕೊಲೆ ಮಾಡಿ ಡ್ರೈವಿಂಗ್ ಸೀಟ್ ನಲ್ಲಿ ಆಕೆಯನ್ನು ಕೂರಿಸಿ ಕಾರು ಅಪಘಾತದಲ್ಲಿ ಮೃತಪಟ್ಟಿರುವಂತೆ ಮಾಡಿ ಮನೆಗೆ ಬಂದು ಏನೂ ಗೊತ್ತಿಲ್ಲದಂತೆ ಮಲಗಿದ್ದ. ಮಾರನೇ ದಿನ ತನ್ನ ವಕೀಲರ ಮೂಲಕ ಮನರಾಮ್ ಅಪಘಾತದ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಆರಂಭದಲ್ಲೇ ಅನುಮಾನ ಉಂಟಾಗಿದ್ದು, ಇಬ್ಬರ ಫೋನ್ ಲೊಕೇಷನ್ ಪರಿಶೀಲಿಸಿದಾಗ ಮುಖೇಶ್ ಮೃತಪಟ್ಟ ಸಮಯದಲ್ಲಿ ಮುಖೇಶನು ಅಲ್ಲಿಯೇ ಇದ್ದ ಎಂಬುದು ದೃಢಪಟ್ಟಿತ್ತು. ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.



