ನವದೆಹಲಿ: ಮದುವೆ ಆದ ಒಂದೇ ವರ್ಷಕ್ಕೆ ಮದುವೆ ಮುರಿದುಬಿದ್ದಿದ್ದು, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ ಪರಿಹಾರ ಮೊತ್ತವಾಗಿ 5 ಕೋಟಿ ಬೇಡಿಕೆ ಇಟ್ಟಿದ್ದನ್ನು ಕೇಳಿದ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಪರ್ದಿವಾಲಾ ನೇತೃತ್ವದ ದ್ವಿಸದಸ್ಯ ಪೀಠ, ಬುಧವಾರ ವಿಚ್ಛೇದನ ಅರ್ಜಿಯ ವಿಚಾರಣೆ ವೇಳೆ ಮಹಿಳೆ ಜೀವನಾಂಶಕ್ಕೆ ಸಲ್ಲಿಸಿದ ಬೇಡಿಕೆ ಕೇಳಿ ಆಘಾತಕ್ಕೆ ಒಳಗಾಯಿತು. ಅಲ್ಲದೇ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ವಿಚ್ಛೇದನ ಬಯಸಿದ ದಂಪತಿಗೆ ಸುಪ್ರೀಂಕೋರ್ಟ್ ಮೆಡಿಟೆಷನ್ ಸೆಂಟರ್ ಗೆ ಹೋಗಲು ಸೂಚಿಸಿದ್ದು, ಒಂದು ವರ್ಷ ನೆಟ್ಟಗೆ ಸಂಸಾರ ಮಾಡಲು ಆಗದೇ ಇದ್ದರೂ ಜೀವನಾಂಶ ಮೊತ್ತವಾಗಿ ಇಷ್ಟು ದೊಡ್ಡ ಮೊತ್ತ ಕೇಳುವುದು ಸರಿಯೇ? ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಆಗುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿಗಳು ಆತಂಕ ವ್ಯಕ್ತಪಡಿಸಿದರು.
ಅತ್ಯಂತ ಕಠಿಣ ಶಿಕ್ಷೆ ವಿಧಿಸುವ ಬಗ್ಗೆ ನ್ಯಾಯಾಲಯ ಯೋಚಿಸಬೇಕಾಗುತ್ತದೆ ಎಂದು 5 ಕೋಟಿ ರೂ. ಜೀವನಾಂಶ ಕೇಳಿದ ಮಹಿಳೆಯನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ.
ನೀನು ದೊಡ್ಡ ತಪ್ಪು ಮಾಡುತ್ತಿದ್ದಿಯಾ ಎಂದು ಇಂತಹ ಪತ್ನಿಯನ್ನು ವಾಪಸ್ ಬೇಕು ಎಂದು ಕೇಳಿದ ಪತಿಗೆ ನ್ಯಾಯಾಲಯ ಬುದ್ದಿವಾದ ಹೇಳಿದೆ.
ಒಂದು ವರ್ಷಕ್ಕೆ ದಾಂಪತ್ಯಕ್ಕೆ ಕೊನೆ ಹಾಡುತ್ತಿರುವ ನೀವು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದೀರ. ಪತ್ನಿ 5 ಕೋಟಿ ಜೀವನಾಂಶ ಕೇಳುತ್ತಿದ್ದಾಳೆ. ಈ ಪ್ರಕರಣವನ್ನು ನಾವು ಸುಪ್ರೀಂಕೋರ್ಟ್ ಮೆಡಿಟೇಷನ್ ಕೇಂದ್ರ ಗಮನಿಸುವಂತೆ ಸೂಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಮಹಿಳೆ ಇದೇ ನಿಲುವನ್ನು ಮುಂದುವರಿಸಿದರೆ ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇದು ಆಕೆಗೆ ಇಷ್ಟವಾಗದೇ ಇರಬಹುದು. ಜೀವನಾಂಶ ಕೇಳಬೇಕಾದರೂ ಅದು ವಾಸ್ತವಕ್ಕೆ ಹತ್ತಿರವಿರಬೇಕು. ಈ ಪ್ರಕರಣ ಬೇಗನೇ ಇತ್ಯರ್ಥ ಆಗಬೇಕಾದರೆ ಮಹಿಳೆ ತನ್ನ ಬೇಡಿಕೆ ಸೂಕ್ತವಾಗಿ ಮಾಡಬೇಕು ಎಂದು ನ್ಯಾಯಮೂರ್ತಿ ಪರ್ದಿವಾಲಾ ಸೂಚಿಸಿದರು.
ಅಕ್ಟೋಬರ್ 5ಕ್ಕೆ ವಿಚಾರಣೆಯನ್ನು ಮುಂದೂಡಿದ ನ್ಯಾಯಮೂರ್ತಿಗಳು ಅದಕ್ಕೂ ಮುನ್ನ ಮೆಡಿಟೇಷನ್ ಸೆಂಟರ್ ಗೆ ಹೋಗುವಂತೆ ಸೂಚಿಸಿದೆ. ಮೆಡಿಟೆಷನ್ ಸೆಂಟರ್ ವರದಿ ಆಧರಿಸಿ ತೀರ್ಪು ಪ್ರಕಟಿಸುವುದಾಗಿ ಹೇಳಿದೆ.
ಮದುವೆಗಳು ಏಕೆ ಬೇಗ ಮುರಿದು ಬೀಳುತ್ತಿವೆ. ವಿಚ್ಛೇದನ ಹಿಂದಿನ ಉದ್ದೇಶಗಳೇನು? ಮುಂತಾದ ವಿಷಯಗಳ ಕುರಿತು ಮೆಡಿಟೆಷನ್ ಸೆಂಟರ್ ಗಮನ ಹರಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.



