ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಸೋಮವಾರ ರಚಿಸಿರುವ ಹೊಸ ತಂಡದಲ್ಲಿ ಹಲವಾರು ಹೊಸ ಮುಖಗಳಿದ್ದು, ಅನುಭವ ಮತ್ತು ಯುವಕರ ಸಮ್ಮಿಶ್ರಣದಿಂದ ಕೂಡಿದೆ . ಮಹಿಳೆಯರಿಗೆ ಗಣನೀಯ ಪ್ರಾತಿನಿಧ್ಯ ನೀಡಲಾಗಿದೆ.
ಬಿಎಲ್ ಸಂತೋಷ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ. ಅಮೇಥಿಯ ಮಾಜಿ ಸಂಸದೆ ಸ್ಮೃತಿ ಇರಾನಿ, ತ್ರಿಪುರದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್, ಸುನಿಲ್ ಬನ್ಸಾಲ್, ವಿನೋದ್ ತಾವ್ಡೆ, ಗಜೇಂದ್ರ ಪಟೇಲ್, ಸತೀಶ್ ಪೂನಿಯಾ, ಹರೀಶ್ ದ್ವಿವೇದಿ ಮತ್ತು ಸಂಜಯ್ ಭಾಟಿಯಾ ಅವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.
ನಿತಿನ್ ನಬಿನ್ ಪಕ್ಷದ ಮುಖ್ಯಸ್ಥರಾದ ಸುಮಾರು ಆರು ತಿಂಗಳ ನಂತರ ಈ ಘೋಷಣೆ ಬಂದಿದೆ.ಪಕ್ಷವು ಹಲವಾರು ಹಿರಿಯ ನಾಯಕರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅವರಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್, ರಾಮ್ ಮಾಧವ್, ಬೈಜ್ಯಂತ್ ಜಯ್ ಪಾಂಡಾ, ಡಿ. ಪುರಂದೇಶ್ವರಿ, ರೇಖಾ ವರ್ಮಾ, ವರ್ಷಾಬೆನ್ ನರೇಂದ್ರಭಾಯಿ ದೋಷಿ, ಡಾ. ಭಾರತಿ ಪ್ರವೀಣ್ ಪವಾರ್, ಮನ್ಪ್ರೀತ್ ಸಿಂಗ್ ಬಾದಲ್, ಲಾಲ್ ಸಿಂಗ್ ಆರ್ಯ, ಕರ್ನಾಟಕದ ಪ್ರೊ. ಎಂ. ನಾಗರಾಜ, ಪ್ರೊ. ತಾರಿಕ್ ಮನ್ಸೂರ್ ಮತ್ತು ಡಾ. ಮಧುಚಂದ್ರ ಕಾರ್ ಸೇರಿದ್ದಾರೆ. 13 ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ಆರು ಮಂದಿ ಮಹಿಳೆಯರಿದ್ದಾರೆ.
ಹೊಸ ತಂಡ ರೆಡಿ
ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಕವಿತಾ ಪಾಟಿದಾರ್ (ಮಧ್ಯಪ್ರದೇಶ), ಕೆ. ಸುರೇಂದ್ರನ್ (ಕೇರಳ), ಡಾ. ಭೋಲಾ ಸಿಂಗ್ (ಉತ್ತರ ಪ್ರದೇಶ), ಪ್ರದೀಪ್ ವರ್ಮಾ (ಜಾರ್ಖಂಡ್), ಜಗದೀಶ್ ಈಶ್ವರಭಾಯಿ ಪಟೇಲ್ (ಗುಜರಾತ್), ಸಂದೀಪ್ ಪಾಠಕ್ (ದೆಹಲಿ), ಫಾಂಗ್ನಾನ್ ಕೊನ್ಯಾಕ್ (ನಾಗಾಲ್ಯಾಂಡ್), ಸಂಗೀತಾ ಯಾದವ್ (ಉತ್ತರ ಪ್ರದೇಶ), ಅನಿಲ್ ಆಂಟೋನಿ (ಕೇರಳ), ಎಂ. ವೆಂಕಟೇಶನ್ (ತಮಿಳುನಾಡು), ಮನೋಜ್ ಟಿಗ್ಗಾ (ಪಶ್ಚಿಮ ಬಂಗಾಳ), ಸಿದ್ಧಾರ್ಥ್ ಶಂಭು (ಬಿಹಾರ), ಸ್ವದೇಶ್ ಸಿಂಗ್ (ದೆಹಲಿ), ಮೃಗಾಂಕ ಡಿಯೋ ಬರ್ಮನ್ (ಅಸ್ಸಾಂ), ರೋಹನ್ ಗುಪ್ತಾ (ಗುಜರಾತ್) ಮತ್ತು ಜೈ ಪ್ರಕಾಶ್ (ದೆಹಲಿ) ಅವರನ್ನು ನೇಮಿಸಲಾಗಿದೆ. ಪಿಯೂಷ್ ಗೋಯಲ್ ಅವರನ್ನು ಮತ್ತೊಮ್ಮೆ ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿ ನೇಮಕ ಮಾಡಲಾಗಿದೆ.
ರಾಜ್ಯಸಭಾ ಸಂಸದ ತರುಣ್ ಚುಗ್ ಅವರನ್ನು ಕೇಂದ್ರ ಕಚೇರಿ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಗುಜರಾತ್ ಸಂಸದ ಹೇಮಾಂಗ್ ಜೋಶಿ ಅವರಿಗೆ ಯುವ ಮೋರ್ಚಾ ಉಸ್ತುವಾರಿ ವಹಿಸಲಾಗಿದ್ದು, ಮಹಿಳಾ ಮೋರ್ಚಾವನ್ನು ಛತ್ತೀಸ್ಗಢದ ರೂಪ್ ಕುಮಾರಿ ಚೌಧರಿ ನೋಡಿಕೊಳ್ಳಲಿದ್ದಾರೆ.
ಲೋಕಸಭಾ ಸಂಸದ ಅನಿಲ್ ಬಲುನಿ ಮಾಧ್ಯಮ ಸಂಚಾಲಕರಾಗಿ ಮುಂದುವರಿಯಲಿದ್ದಾರೆ. ಸಹ ಸಂಚಾಲಕರಾಗಿ ಆಶಿಶ್ ಉಷಾ ಅಗರ್ವಾಲ್ (ಮಧ್ಯಪ್ರದೇಶ), ಪ್ರದೀಪ್ ಭಂಡಾರಿ (ದೆಹಲಿ) ಮತ್ತು ಸಿದ್ಧಾರ್ಥ್ ಯಾದವ್ (ದೆಹಲಿ) ಇದ್ದಾರೆ. ಛತ್ತೀಸ್ಗಢದ ದೀಪಕ್ ಮಾಸ್ಕಿ ಅವರನ್ನು ಸಾಮಾಜಿಕ ಮಾಧ್ಯಮ ಸಂಚಾಲಕರಾಗಿ ಹೆಸರಿಸಲಾಗಿದೆ.
2027ರಲ್ಲಿ ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಚುನಾವಣೆ ನಡೆಯುವಾಗ ನಿತಿನ್ ನಬಿನ್ ಅವರ ಹೊಸ ತಂಡವು ಪ್ರಮುಖ ಪರೀಕ್ಷೆಯನ್ನು ಎದುರಿಸಲಿದೆ. ಪಕ್ಷದ ರಚನೆಯಲ್ಲಿನ ಈ ಬದಲಾವಣೆಗಳು ಕೇಂದ್ರ ಸಚಿವ ಸಂಪುಟದಲ್ಲಿ ಪುನರ್ರಚನೆಗೆ ದಾರಿ ಮಾಡಿಕೊಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಪಕ್ಷದ ಸಂರಚನೆ
ಬಿಜೆಪಿಯ ಅತ್ಯುನ್ನತ ಮಂಡಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಹಿರಿಯರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ನಾಲ್ವರ ಮಾರ್ಗದರ್ಶಕ ತಂಡವಿದೆ. ಈ ನಾಲ್ವರು ಮಾರ್ಗದರ್ಶಕರು ಪಕ್ಷದ ಚೌಕಟ್ಟನ್ನು ರೂಪಿಸುತ್ತಾರೆ ಮತ್ತು ಪಕ್ಷಕ್ಕೆ ಸೇವೆ ಸಲ್ಲಿಸಿದ ಅನುಭವವನ್ನು ಧಾರೆ ಎರೆಯಲಿದ್ದಾರೆ.
ಮಾರ್ಗದರ್ಶಕ ತಂಡದ ನಂತರ 12 ಸದಸ್ಯರ ಸಂಸದೀಯ ಮಂಡಳಿ ಇದೆ. ಈ ಮಂಡಳಿಯ ಅಧ್ಯಕ್ಷತೆಯನ್ನು ಮೋದಿ ವಹಿಸಿದ್ದಾರೆ. ಮಂಡಳಿಯು ಹಿರಿಯ ಸಚಿವರು ಮತ್ತು ಸಂಘಟನಾ ಪ್ರಮುಖರನ್ನು ಒಳಗೊಂಡಿದೆ.
ನಿತಿನ್ ನಬಿನ್,ರಾಜನಾಥ್ ಸಿಂಗ್
ಅಮಿತ್ ಶಾ,ಜೆ.ಪಿ. ನಡ್ಡಾ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ,ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್, ಒಬಿಸಿ ಸೆಲ್ ಮುಖ್ಯಸ್ಥ ಕೆ. ಲಕ್ಷ್ಮಣ್, ಪಂಜಾಬ್ನ ಇಕ್ಬಾಲ್ ಸಿಂಗ್ ಲಾಲ್ಪುರ,ಹರಿಯಾಣದ ಸುಧಾ ಯಾದವ್ ಮಧ್ಯಪ್ರದೇಶದ ನಾಯಕ ಸತ್ಯನಾರಾಯಣ್ ಜತಿಯಾ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್. ಇನ್ನು ಕೇಂದ್ರ ಚುನಾವಣಾ ಸಮಿತಿ ಇದ್ದು, ಇದರಲ್ಲಿ 12 ಸಂಸದೀಯ ಮಂಡಳಿ ಸದಸ್ಯರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ಭೂಪೇಂದರ್ ಯಾದವ್ ಮತ್ತು ಬಿಜೆಪಿ ಮಹಿಳಾ ಮೋರ್ಚಾದ ಮುಖ್ಯಸ್ಥೆ ವನತಿ ಶ್ರೀನಿವಾಸನ್ ಸೇರಿದ್ದಾರೆ.



